ಸಿಲ್ಕ್ ಸ್ಮಿತಾ ಎಂಬ ಮೋಹಕ ರೂಪಸಿ ಬದುಕಿದ್ದು ಕೇವಲ ಮೂವತ್ತೈದು ವರ್ಷಗಳಷ್ಟೇ. ಅಷ್ಟರಲ್ಲಿ ನಮ್ಮ ಮನಸು ಚಿತ್ತವನ್ನು ಕೆಣಕಿ ಕದಲಿಸುವ ಸೆಕ್ಸ್ ಬಾಂಬ್ ಎಂದು ಸಿನಿಮಾ ಮಂದಿಯಿಂದ ನಾಮಾಂಕಿತಗೊಂಡು ಜೀವಂತ ದಂತಕಥೆಯಾಗಿದ್ದ ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮೀ ನಮ್ಮ ಚಿತ್ರ ರಸಿಕರನ್ನು ಅಗಲಿ ಇಪ್ಪತ್ತೈದು ವರ್ಷ ಕಳೆದರೂ ಇನ್ನೂ ಆಕೆಯ ನೋಟ, ಮಾದಕತೆ ನಮ್ಮ ಸಿನಿ ಅಭಿಮಾನಿಗಳನ್ನು ಅಗಲಿದಂತಿಲ್ಲ. ಸಣ್ಣ ವಯಸ್ಸಿನಲ್ಲಿ ಮದುವೆಯ ಜಾಲಕ್ಕೆ ಸಿಲುಕಿ ನೋವುಂಡ ವಿಜಯಲಕ್ಷ್ಮೀ ಅಷ್ಟೇ ಬೇಗ ತೊರೆದು ಜೀವಿಸಬಹುದು ಎಂಬುದನ್ನು ಸಾಧಿಸಿ ತೋರಿಸಿ ಪಿಚ್ಚರ್ ನಿರ್ಮಾಪಕರ ತಿಜೋರಿ ತುಂಬುವ ಲಕ್ಷ್ಮೀಯಾಗಿ ಸಿಲ್ಕ್ ಇನ್ ಸ್ಕ್ರೀನ್ ಆದವಳು.
ನಾಯಕ ನಾಯಕಿಯರಿಗೆ ಸರಿಸಮನಾಗಿ ನಟಿಸಿದ್ದಲ್ಲದೆ ಕ್ಲಬ್ ಡ್ಯಾನ್ಸ್ನಲ್ಲಿ ಮಿರಿ ಮಿರಿ ಮಿಂಚಿದ ದಕ್ಷಿಣ ಭಾರತದ ಮೊದಲಿಗಳು ವಿಜಯಲಕ್ಷ್ಮಿ ಯಾನೆ ಸಿಲ್ಕ್ ಸ್ಮಿತಾ. ಕೆಲವು ಅತ್ಯುತ್ತಮ ಪಾತ್ರಗಳು ಆಕೆಯ ಪಾಲಿಗೆ ಸೃಷ್ಟಿಯಾಯಿತು, ಇನ್ನೂ ಕೆಲವು ಅವಳ ಮೈಮಾಟವನ್ನು ಹುಡುಕಿ ಬಂದವು. ತನ್ನ ಲೀಲಾಜಾಲ ಅಭಿನಯ, ಕಣ್ಣೋಟ, ನಯ ನಾಜೂಕುತನ ಸಿಲ್ಕ್ ಸ್ಮಿತಾಳನ್ನು ಬಹು ಎತ್ತರದ ನಟಿಯನ್ನಾಗಿಸಿ ಭಾರತೀಯ ಚಿತ್ರರಂಗ ಗುರುತಿಸಿತು. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಚಿತ್ರ ಮಂದಿರಕ್ಕೆ ಬರುವಂತೆ ಮಾಡಿದ್ದೇ ಸಿಲ್ಕ್. ಆಕೆ ತೆರೆಯ ಮೇಲೆ ಬರುವಷ್ಟೂ ಹೊತ್ತು ನೋಡುತ್ತಿದ್ದ ಹೈಕಳು ಆಮೇಲೆ ಲೋಚ ಗುಟ್ಟುತ್ತಾ ಆಚೆ ನಡೆಯುತ್ತಿದ್ದರು.
ಆಂಧ್ರ ಪ್ರದೇಶದ ದಿಂಡಲೂರು ಮಂಡಲದಲ್ಲಿ ಜನಿಸಿದ ಈ ಮೋಹಕ ತಾರೆ ಕೇವಲ ನಾಲ್ಕೈದು ತರಗತಿಯಷ್ಟೇ ಓದಲು ಸಾಧ್ಯವಾಯಿತು. ಬಡತನದ ಬೇಗೆಯಿಂದ ವಿಜಯಲಕ್ಷ್ಮೀಗೆ ಬಾಲ್ಯವಿವಾಹವಾಗಿ ಗಂಡನ ಮನೆಯ ಹಿಂಸೆ ತಡೆಯಲಾರದೇ ಊರು ಬಿಟ್ಟು ಓಡಿದವಳು ಬಂದು ನಿಂತಿದ್ದು ಮತ್ತೊಂದು ರಂಗೀನ್ ಜಗತ್ತಿನಲ್ಲಿ. ಪಿಚ್ಚರ್ ಹಿರೋಯಿನ್ಗಳಿಗೆ ಟಚಪ್ ಮಾಡುವ ಹುಡುಗಿಯಾಗಿ ಇತರರನ್ನು ನೋಡುತ್ತಲೇ ಅಭಿನಯ ಕಲಿತವಳಿಗೆ ಮೊದಲ ಸಿನಿಮಾ ಮಾಡಲು ಮಲೆಯಾಳಂ ಚಿತ್ರರಂಗದ ನಿರ್ದೇಶಕ ಆಂಟನಿ ಈಸ್ಟಮನ್ ಸ್ಮಿತಾ ಎಂದು ನಾಮಕರಣ ಮಾಡಿ “ಇನಿಯ ತೇದಿ” ಎಂಬ ಚಿತ್ರ ನಿರ್ದೇಶಿಸಿದ. ಆತನ ಪತ್ನಿ ಈಕೆಯ ಕಥೆ ಕೇಳಿ ಅನುಕಂಪ ಹರಿಸಿ ಸ್ಮಿತಾಳನ್ನು ಅತ್ಯುತ್ತಮ ಡ್ಯಾನ್ಸರ್ ಆಗಿ ರೂಪಿಸಿದಳು.
1979 ರಲ್ಲಿ ತೆರೆಕಂಡ ʻವಂಡಿ ಚಕ್ರʼ ಚಿತ್ರದಲ್ಲಿ ಸ್ಮಿತಾ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಳು, ಚಿತ್ರವೂ ಬಿಗ್ ಹಿಟ್ ಆಯಿತು. ಆಮೇಲೆ ಆಕೆ ತಿರುಗಿ ನೋಡಲೇ ಇಲ್ಲ. ಕಮಲ್, ರಜನೀಕಾಂತ್ ಚಿತ್ರಗಳಲ್ಲಿ ಮತ್ತು ಮಣಿರತ್ನರಂತಹ ಟಾಪ್ ನಿರ್ದೇಶಕರ ಚಿತ್ರಗಳಲ್ಲಿ ಸಿಲ್ಕ್ ಮಿಂಚಿದಳು. ಆಗಲೇ ಬಾಲು ಮಹೇಂದರ್ರ “ಮೂನ್ರಾ ಪಿರೈ” ಸೂಪರ್ ಹಿಟ್ ಆಯಿತು. ಆದರೆ ವಿಜಯಲಕ್ಷ್ಮಿ ಉರುಫ್ ಸಿಲ್ಕ್ ಸ್ಮಿತಾಳಿಗೆ ಕನ್ನಡದ ಅಆಇಈ ಕಲಿಸಿದವರು ಕನಸುಗಾರ ರವಿಚಂದ್ರನ್. ಹಳ್ಳಿ ಮೇಸ್ಟ್ರು ತಮಿಳಿನಲ್ಲಿ ಭಾಗ್ಯರಾಜ್ ಹಾಗೂ ಊರ್ವಶಿ ಅಭಿನಯದ ʻಮುಂದಾನೈ ಮುಡಿಚ್ಚುʼ ತಮಿಳು ನಾಡಿನ ಮನೆ ಮನೆ ಮಾತಾಯಿತು. ಸಿನಿಮಾದ ಪಡಿಯಚ್ಚಾದರೂ ಕನ್ನಡದಲ್ಲಿ ಹಳ್ಳಿ ಮೇಸ್ಟ್ರು ಮತ್ತು ದಿಲ್ಲಿ ಮೇಡಂ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದರು.
ಸಿಲ್ಕ್ ಸ್ಮಿತಾಳ ನೇರವಂತಿಕೆಯೇ ಆಕೆಯ ವೀಕ್ ನೆಸ್ ಆಗಿಹೋಯಿತು. ನಿಗದಿತ ಸಮಯಕ್ಕೆ ಶೂಟಿಂಗ್ ಹಾಜರಾಗಿ ತನ್ನ ಪಾಲಿನ ಕೆಲಸ ನಿರ್ವಹಣೆ ಮಾಡುತ್ತಿದ್ದರೂ ಬಿಗ್ ಹೀರೋ ಹಿರೋಯಿನ್ಗಳು ಸಮಯ ಪಾಲನೆ ಮಾಡದ ಕುರಿತು ಹಲವು ಸಲ ಆಕೆಯ ಆಕ್ಷೇಪಣೆಗೆ ಸಕಾರಣಗಳಿದ್ದವು. ತನಗೆ ಮೋಸ ಮಾಡಿದವರ ಹೆಸರುಗಳನ್ನು ತನ್ನ ನಾಯಿಗಳಿಗೆ ಇಟ್ಟು ಕರೆಯುತ್ತಿದ್ದಳು ಸಿಲ್ಕ್ ಸ್ಮಿತ. ಎಷ್ಟೋ ನಿರ್ದೇಶಕ ನಿರ್ಮಾಪಕರು ಆಕೆಯ ಈ ನಡೆಗೆ ಬೆದರುತ್ತಿದ್ದರು. ಬಡತನದ ಗಂಜಿ ಉಂಡು ಬೆಳೆದ ಸಿಲ್ಕ್ ತನ್ನ ಪ್ರತಿಭೆಯಿಂದ ಬೆಳ್ಳಿ ತೆರೆ ಬೆಳಗಿ ತಾರೆಯಾದ ಮೇಲೆ ತಾನು ಮಾಡುವ ಊಟಕ್ಕೆ ಇತರರಿಗೆ ಮಾದರಿಯಾದ ರೀತಿಯಲ್ಲಿ ಬಾಯಲ್ಲಿ ನೀರು ಬರಿಸುತ್ತಿದ್ದಳು. ಒಂದು ದೊಡ್ಡ ಡೈನಿಂಗ್ ಟೇಬಲ್ ಮುಂದೆ ಖುದ್ದು ಐಟಂ ಎಂದು ಕರೆಸಿಕೊಳ್ಳುತ್ತಿದ್ದ ಸಿಲ್ಕ್ ಸ್ಮಿತಾ ಊಟಕ್ಕೆ ಕುಳಿತರೇ ಹತ್ತಾರು ಭಕ್ಷ್ಯ ಭೋಜನಗಳ ಐಟಂಗಳು ಇರಲೇಬೇಕಿತ್ತು. ಆಕೆಗೆ ಬೇಕಾದ ಏಸ್ ಕ್ರೀಂ, ಜ್ಯೂಸ್ ಟೇಬಲ್ ತುಂಬಾ ಹರಡಿರುತ್ತಿದ್ದವು. ಆಕೆ ತನಗೆ ಬೇಕಾದಷ್ಟನ್ನೇ ತಿಂದು ಯಾವುದನ್ನು ಎಂಜಲು ಮಾಡದೇ ತನ್ನ ಯೋಗ ಕ್ಷೇಮ ನೋಡಿಕೊಳ್ಳುವವರಿಗೆ ಆ ಆಹಾರ ಮೀಸಲಾಗಿಟ್ಟು ತಿನ್ನಿಸುತ್ತಿದ್ದಳು ಸ್ಮಿತಾ, ಸರಿಯಾಗಿ ಹೇಳಬೇಕೆಂದರೆ ಅವಳು ಅಷ್ಟು ಫುಡ್ ಆರ್ಡರ್ ಮಾಡುತ್ತಿದ್ದದೇ ತನ್ನನು ನಂಬಿದವರಿಗೊಸ್ಕರ.
ಜೀವನದಲ್ಲಿ ತುಂಬಾ ನೊಂದು ಬೆಂದು ಹೋಗಿದ್ದ ಸಿಲ್ಕ್ ಸ್ಮಿತಾ ನೇರ ನಡೆ ನುಡಿಯಿದ್ದರೂ ಮಗುವಿನಂತೆ ಮನಸು ಹೊಂದಿದ್ದವಳು. ಆಕೆಯನ್ನು ಹಲವರು ಉಪಯೋಗಿಸಿಕೊಂಡರೆ ಮತ್ತೆ ಕೆಲವರು ದುರುಪಯೋಗಿಸಿಕೊಂಡರು. ಕೊನೆಗವಳು ಕುಡಿತದ ನಿಶೆಯಲ್ಲಿ ಬದುಕತೊಡಗಿದಳು. ತಾನು ನಂಬಿದವರಿಂದ ಮೋಸ ಹೋಗಿದ್ದಲ್ಲದೆ ನಿಂದನೆಗೂ ಒಳಗಾಗಿ ನೊಂದು ಹೋದಳು. ಆ ಒಂದು ದಿನ ಲೆಕ್ಕಕ್ಕೆ ಸಿಕ್ಕದಷ್ಟು ಕುಡಿದು ನೇಣಿಗೆ ಶರಣಾದಳೆಂದು ಆಕೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ಸಾರಿ ಹೇಳಿತು.
ಸಿಲ್ಕ್ ಸಾಯುವ ಮೊದಲು ತನ್ನ ಆತ್ಮೀಯ ಗೆಳತಿ ಮತ್ತೊಬ್ಬ ಡ್ಯಾನ್ಸರ್ ಅನುರಾಧಳಿಗೆ ಫೋನ್ ಮಾಡಿ ಗದ್ಗದಿತಳಾಗಿದ್ದಳು. ಅನುರಾಧಾ ತನ್ನ ಮಗಳನ್ನು ಶಾಲೆಗೆ ಬಿಟ್ಟು ಗೆಳತಿ ಸ್ಮಿತಾಳನ್ನು ಬದುಕಿಸಿಕೊಳ್ಳಲು ಓಡೋಡಿ ಬಂದಳು. ಬಿಕ್ಕಿ ಬಿಕ್ಕಿ ಅಳುತ್ತಾ ನೇತಾಡುತ್ತಿದ್ದ ಗೆಳತಿಯ ಪಾದಕ್ಕೆ ಮುತ್ತಿಕ್ಕಿದಳು. ಸೆಕ್ಸ್ ಬಾಂಬ್ ಎಂದು ಮಜಾ ತೆಗೆದುಕೊಂಡ ಸಿನಿಮಾರಂಗದ ಮಾಂಸದ ಮುದ್ದೆಯೊಂದು ತನ್ನ ಕೊನೆಯ ಉಸಿರೆಳೆದಿತ್ತು. ಸಿಲ್ಕ್ ಸ್ಮಿತಾ ನಮ್ಮನ್ನಗಲಿ ಇಪ್ಪತ್ತೈದು ವರ್ಷಗಳ ಮೇಲಾದರೂ ಅವಳ ನೆನಪು ಮಾಸದೇ ಇಂದಿಗೂ ಉಳಿದಿದೆ.
-ವೈ.ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು, ಬರಹಗಾರರು. ಬೆಂಗಳೂರು