`ಪುನೀತ್ ಕೇವಲ ಪವರ್ ಸ್ಟಾರ್’ಅಲ್ಲ.. ಜನರ ಹೃದಯ ಗೆದ್ದ `ಹೃದಯದ ಸ್ಟಾರ್’
ಬೆಂಗಳೂರು : ಪುನೀತ್ ಕೇವಲ ಪವರ್ ಸ್ಟಾರ್ ಅಲ್ಲ. ಕರ್ನಾಟಕ ರಾಜ್ಯದ ಜನರ ಹೃದಯವನ್ನ ಗೆದ್ದಿದ್ದಾರೆ. ‘ಹೃದಯದ ಸ್ಟಾರ್’ ಅಂದ್ರೂ ತಪ್ಪಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರ ಸಜ್ಜನಿಕೆ, ಸರಳತೆ, ಸಮಾಜ ಮುಖಿ ಕಾರ್ಯಗಳನ್ನು ನೆನದು ಭಾವುಕರಾದರು.
ನಾವು ಕಳೆದ ಮೂರು ದಿನಗಳಿಂದ ಜನ ಸಾಗರವನ್ನೇ ನೋಡಿದ್ದೇನೆ. ನಾನು ಯಾವಗಲೂ ಹೇಳ್ತಾ ಇದ್ದೆ, ಮನುಷ್ಯನ ಹುಟ್ಟು ಆಕಸ್ಮಿಕ, ಆದರೆ ಸಾವು ಅನಿವಾರ್ಯ ಅಂತಾ.
ಹುಟ್ಟು ಸಾವಿನ ಮಧ್ಯೆ ನಾವು ಏನ್ ಮಾಡಿದ್ದೇವೆ ಅನ್ನೋದು ಮುಖ್ಯ. ಪುನೀತ್ ಹುಟ್ಟು ಸಾವಿನ ಮಧ್ಯೆ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಅವರು ಪವರ್ ಸ್ಟಾರ್ ಆಗಿದ್ದಾರೆ. ಅವರು ಅಜಾತ ಶತ್ರು ಎಂದು ಡಿಕೆಶಿ ಕಣ್ಣೀರಿಟ್ಟರು.
ಇದೇ ವೇಳೆ ಪುನೀತ್ ರಾಜಕುಮಾರ್ ಅವರನ್ನು ಹೃದಯದ ಸ್ಟಾರ್ ಎಂದ ಡಿಕೆಶಿ, ಪುನೀತ್ ಕೇವಲ ಪವರ್ ಸ್ಟಾರ್ ಅಲ್ಲ. ಕರ್ನಾಟಕ ರಾಜ್ಯದ ಜನರ ಹೃದಯ ಗೆದ್ದ ಹೃದಯದ ಸ್ಟಾರ್. ನಾನು ಪುನೀತ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಕಲಾವಿದ ಮಾತ್ರವಲ್ಲ. ಸಮಾಜದ ಸೇವೆಯಲ್ಲಿ ಅವರ ಕೊಡುಗೆ ದೊಡ್ಡದು ಎಂದು ಪುನೀತ್ ರ ಸಮಾಜ ಮುಖಿ ಕಾರ್ಯಗಳನ್ನು ನೆನೆದರು.