ರಾಜ್ಯಭಾರ ಮಾಡಲು ಹೊರಟವರು..
ಈ ಹಿಂದೆ ರಾಜಧಾನಿ ಚಿತ್ರದಲ್ಲಿ ಅಭಿನಯಿಸಿದ್ದ ನಟ ರವಿತೇಜ ಈಗ ರಾಜ್ಯಭಾರ ಮಾಡಲು ಹೊರಟಿದ್ದಾರೆ. ಅಂದರೆ ರಾಜ್ಯಭಾರ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಎ.ಸಿ.ವೆಂಕಟೇಶ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು. ರವಿತೇಜ ಅವರ ಭಾಮೈದ ಆರ್.ಕಾರ್ತೀಕ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ರವಿತೇಜ, ಅರ್ವ, ಸನತ್, ಕಲ್ಯಾಣ್, ಅಕ್ಷಯ್, ಉಷಾಭಂಡಾರಿ, ಸೋನು, ಶಿವು ಮುಂತಾದವರು ಅಭಿನಯಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ರಾಜೇಶ್ ಗುರೂಜಿ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕನಟ ರವಿತೇಜ ಎಲ್ಲಾ ಕಡೆ ತಮ್ಮದೇ ಹವಾ, ದರ್ಬಾರ್ ನಡೀಬೇಕು ಎಂದುಕೊಂಡಿದ್ದ ನಾಲ್ವರು ಹುಡುಗರ ಕಥೆಯಿದು. ರಾಜಧಾನಿ ಚಿತ್ರದ ಇನ್ನೊಂದು ವರ್ಷನ್ ಎನ್ನಬಹುದು, ನಾಲ್ಕು ಜನ ಹುಡುಗರು ಒಂದು ಕೆಟ್ಟ ಪರಿಸ್ಥಿತಿಯಲ್ಲಿ ಕೆಟ್ಟ ದಾರಿಯಲ್ಲಿ ನಡೆದಾಗ ಅದರ ಪರಿಣಾಮವನ್ನು ಇಡಿ ಕುಟುಂಬವೇ ಎದುರಿಸಬೇಕಾಗುತ್ತದೆ. ಅವರು ಒಳ್ಳೇ ದಾರಿಯಲ್ಲಿ ಹೋಗಿದ್ದರೆ ಒಳ್ಳೆಯದಾಗುತ್ತಿತ್ತು ಎನ್ನುವುದೇ ಈ ಚಿತ್ರದ ಕಥೆ. ಎಲ್ಲಾ ವಯಸ್ಸಿನ ಹುಡುಗರಿಗೂ ನನ್ನದೇ ಹವಾ ನಡೆಯಬೇಕು ಎಂದಿರುತ್ತದೆ. ಹಾಗೇ ಈ ೪ ಜನ ಹುಡುಗರು ದರ್ಬಾರ್ ನಡೆಸಲು ಹೋಗುತ್ತಾರೆ. ಈ ವಿಷಯವನ್ನು ಸಿನಿಮಾದಲ್ಲಿ ಹೇಳ ಹೊರಟಿದ್ದೇವೆ ಎನ್ನುತ್ತಾರೆ ರವಿತೇಜ.
ನಿರ್ದೇಶಕ ಆರ್. ಕಾರ್ತೀಕ್ ಮಾತನಾಡುತ್ತ ಇವತ್ತು ನಾನಿಲ್ಲಿರಲು ನನ್ನ ಭಾವ ರವಿತೇಜ ಕಾರಣ. ಒಂದೊಳ್ಳೆ ಕಥೆ ಮಾಡಿಕೊಂಡು ರಾಜ್ಯಭಾರ ಎನ್ನುವ ಸಿನಿಮಾ ನಿರ್ಮಿಸಲು ಹೊರಟಿದ್ದೇವೆ. ಬರುವ ಏಪ್ರಿಲ್ ಎರಡನೇ ವಾರ ಚಿತ್ರದ ಚಿತ್ರೀಕರಣ ಆರಂಭಿಸಲಿದ್ದೇವೆ. ರವಿತೇಜ, ಉಷಾ ಭಂಡಾರಿ, ಅರವ್, ಅಂಜಲಿ, ಸೋನು, ಸನತ್ ಅಕ್ಷಯ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಪ್ರಮುಖ ಪಾತ್ರವೊಂದರಲ್ಲಿ ದೊಡ್ಡ ಕಲಾವಿದರೊಬ್ಬರು ನಟಿಸುತ್ತಿದ್ದಾರೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ವೆಂಕಟೇಶ್ ಮಾತನಾಡಿ ಸುಮ್ಮನೆ ಮಾತಾಡುತ್ತಿರುವಾಗ ಹುಟ್ಟಿದ ಕಥೆಯಿದು. ನಾವೆಲ್ಲ ಪ್ರತಿದಿನ ನೋಡುತ್ತಿರುವ ಘಟನೆಗಳೇ ಇದರಲ್ಲಿರುತ್ತವೆ. ರಾಜಕಾರಣಿಗಳು ಸಾಮಾನ್ಯ ಮನುಷ್ಯರನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು ಅವರನ್ನು ಹೇಗೆ ಹಾಳು ಮಾಡುತ್ತಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಚಿತ್ರದಲ್ಲಿ ನಾನೂ ಒಂದು ಪಾತ್ರ ಮಾಡುತ್ತಿದ್ದೇನೆ ಎಂದರು.