ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ಕರುನಾಡಿನಾದ್ಯಂತ ದುಃಖದ ವಾತಾವರಣವಿದೆ. ಅಭಿಮಾನಿಗಳಿನ್ನೂ ವರೆಗೂ ಈ ನೋವಿನಿಂದ ಹೊರಬಂದಿಲ್ಲ. ಈ ಕಹಿ ಸತ್ಯವನ್ನ ಒಪ್ಪಿಕೊಳ್ಳಲು ಕಷ್ಟಪಡ್ತಿದ್ದಾರೆ. ಈ ನಡುವೆ ಅಪ್ಪು ನಿಧನದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಡಾ. ರಾಜ್ಕುಮಾರ್ ಸೇನೆಯಿಂದ ಶುಕ್ರವಾರ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪುನೀತ್ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಡಾ. ರಮಣರಾವ್ ಮಾಡಿರುವ ಪ್ರಮಾದದ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಡಾ. ರಮಣರಾವ್ ವಿರುದ್ಧ ಅಭಿಮಾನಿಗಳು ನೀಡುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್, ನನ್ನ ಸಹೋದರ ಇಲ್ಲದ ಮೇಲೆ ದೂರು ಕೊಟ್ಟು ಏನು ಪ್ರಯೋಜನ. ಅವರವರ ಹೃದಯಕ್ಕೆ ಅದು ಅರ್ಥವಾದರೆ ಸಾಕು ಎಂದು ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಿವಣ್ಣ ಅವರ ಮಾತಿನ ಮರ್ಮ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಡಾ. ರಾಜ್ಕುಮಾರ್ ಸೇನೆ ವತಿಯಿಂದ ಸದಾಶಿವನಗರ ಪೊಲೀಸ್ ಠಾಣೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಗಿತ್ತು. ನಟ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಡಾ. ರಮಣರಾವ್ ಅವರ ನಿರ್ಲಕ್ಷ್ಯವೇ ಕಾರಣ. ಅ. 29 ರಂದು ಪುನೀತ್ ರಾಜ್ಕುಮಾರ್ ಅವರು ರಮಣರಾವ್ ಕ್ಲಿನಿಕ್ಗೆ ಹೋಗಿದ್ದರು. ಈ ವೇಳೆ ಡಾ. ರಮಣರಾವ್ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ತಪಾಸಣೆ ವೇಳೆ ಯಾವುದೇ ಚಿಕಿತ್ಸೆಯನ್ನೂ ನೀಡಿಲ್ಲ. ಪರಿಸ್ಥಿತಿ ಗಂಭೀರತೆ ಅರಿತು ಸಮೀಪದ ಆಸ್ಪತ್ರೆಗೆ ದಾಖಲಿಸದೇ ತಮ್ಮ ಮಗ ಕೆಲಸ ಮಾಡುವ ವಿಕ್ರಂ ಆಸ್ಪತ್ರೆಗೆ ರವಾನಿಸಿದ್ದಾರೆ. ಕೂಡಲೇ ರಮಣರಾವ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಡಾ. ರಾಜ್ಕುಮಾರ್ ಸೇನೆ ಅಧ್ಯಕ್ಷ ತ್ಯಾಗರಾಜ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.