ಅಪ್ಪು ಅಭಿಮಾನಿಗಳು , ಪೊಲೀಸರು , ಆಪ್ತರು , ತಾರೆಯರು , ಸಿಎಂಗೆ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ ಅಶ್ವಿನಿ
ಬೆಂಗಳೂರು: ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಗೊತ್ತಾಗ್ತಿದ್ದಂತೆ ರಾಜ್ಯಾದ್ಯಂತದಿಂದ ಅಭಿಮಾನಿಗಳು ದುಃಖದಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಲೇ ಕಂಠೀರವ ಸ್ಟೇಡಿಯಮ್ ನತ್ತ ದೌಡಾಯಿಸಿದ್ದರು.. ಈ ನಡುವೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿ ಯಾವುದೇ ನೂಕು ನುಗ್ಗಲು , ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಅಂತಿಮ ಕ್ರಿಯೆಗೆ ಸಕಲ ಸಿದ್ಧತೆಗಳನ್ನ ನೆಡಸಲು ನೆರವಾಗಿತ್ತು.
ಇಂದಿಗಿ ಅಪ್ಪು ನಮ್ಮನ್ನೆಲ್ಲ ಅಗಲಿ 11 ದಿನಗಳು ಕಳೆದಿದೆ. ಆದ್ರೆ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದ ನೋವು ಮಾತ್ರ ಇನ್ನೂ ಮಾಸಿಲ್ಲ. ಆದರೂ ಅಪ್ಪು ಪತ್ನಿ ಪತ್ರ ಬರೆದು ಅಂತಿಮ ಕ್ರಿಯೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಮುಖ್ಯವಾಗಿ , ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸುವ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಬೆಂಗಳೂರು ಜಿಲ್ಲಾಧಿಕಾರಿ, ಪೊಲೀಸರು ಹೀಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
“ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೆ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹ ಸಂದರ್ಭದಲ್ಲಿ ಇಡೀ ಪೊಲಿಸ್ ಇಲಾಖೆ ನಮಗೆ ಬೆಂಬಲವಾಗಿ ನಿಂತು ಗೌರವಯುವತವಾಗಿ ಅವರನ್ನು ಕಳುಹಿಸಿಕೊಡಲು ಸಹಕರಿಸಿದೆ. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ, ಮೆರವಣಿಗೆಯಲ್ಲಿ ಮತ್ತು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ ಎಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಂಡಿದ್ದೀರಿ. ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲಾ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ನಿಮ್ಮ ಎಲ್ಲ ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳು” ಎಂದಿದ್ದಾರೆ.