ಇತ್ತೀಚೆಗಷ್ಟೇ ಪತಿ ಹಾಗೂ ಮಾವನ ವಿರುದ್ಧವೇ ವಂಚನೆ ಕೇಸ್ ದಾಖಲಿಸಿದ್ದ ನಟಿ ಚೈತ್ರಾಗೆ ಇದೀಗ ಸಂಕಷ್ಟ ಶುರುವಾಗಿದೆ.. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಚೈತ್ರಾ ಹಳ್ಳಿಕೆರೆ ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಇದೀಗ ಚೈತ್ರ ವಿರುದ್ಧ ಆಕೆಯ ಪತಿ ಸಾಲು ಸಾಲು ಆರೋಪಗಳನ್ನ ಹೊರಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮೈಸೂರಿನಲ್ಲಿ ಪತಿಯ ವಿರುದ್ಧ ಚೈತ್ರಾ ಹಳ್ಳಿಕೆರೆ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಪತಿಯ ವಿರುದ್ಧ ಆರೋಪಗಳನ್ನು ಮಾಡಿದ್ದರು.
ಇದೀಗ ನಟಿ ಚೈತ್ರಾ ಹಳ್ಳಿಕೆರೆ ವಿರುದ್ಧ ಪತಿ ಬಾಲಾಜಿ ಸುದ್ದಿಗೋಷ್ಠಿ ನಡೆಸಿ ಚೈತ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ ಹಾಗೂ ಚೈತ್ರಾ ತಮ್ಮ ವಿರುದ್ಧ ನೀಡಿರುವ ದೂರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಚೈತ್ರಾ ಪತಿ ಬಾಲಾಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡ್ತಾ , ಮೊದಲು ನಮ್ಮ ಸಂಸಾರ ಚೆನ್ನಾಗಿಯೇ ಇತ್ತು, ಇಬ್ಬರು ಮಕ್ಕಳಾದ ಮೇಲೆ ಚೈತ್ರಾಗೆ ಫ್ರೀಡಂ ಬೇಕು ಎಂದೆನಿಸಲು ಶುರುವಾಯಿತು.
ಮಿಸೆಸ್ ಇಂಡಿಯಾ ಸ್ಪರ್ಧೆಗೂ ರೆಡಿಯಾಗಲು ಪ್ರಾರಂಭಿಸಿದರು. ಫ್ರೀಡಂ ವಿಷಯಕ್ಕೆ ನಮ್ಮಿಬ್ಬರ ನಡುವೆ ಜಗಳಗಳು ನಡೆಯಲು ಆರಂಭವಾಯಿತು. ಆದರೆ ಮಕ್ಕಳ ಕಾರಣಕ್ಕೆ ನಾನು ಎಲ್ಲವನ್ನು ಹಾಗೋ ಹೀಗೋ ಸಹಿಸಿಕೊಂಡು ಹೋದೆ.
ನಮ್ಮಿಬ್ಬರ ನಡುವಿನ ಗಲಾಟೆ ಇತ್ತೀಚಿನದ್ದಲ್ಲ ಹಲವು ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ನನಗೆ ಪಬ್ಲಿಕ್ ಲೈಫ್ ಬೇಕು ಎಂದು ಗಲಾಟೆ ಮಾಡುತ್ತಿದ್ದರು. ಅವಳಿಗೆ ವ್ಯತಿರಿಕ್ತವಾಗಿ ನಾನು ಮಾತನಾಡಿದರೆ ಮಹಿಳಾಪರ ಕಾನೂನುಗಳು ಬಳಸಿಕೊಂಡು ನನ್ನನ್ನು ಜೈಲಿಗೆ ಅಟ್ಟುವುದಾಗಿ ಬೆದರಿಕೆ ಹಾಕಿದ್ದರು ಎಂದಿದ್ದಾರೆ..
ಫ್ರೀಡಂ ಬೇಕು ಎಂದು ಇರುವ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಮಾಡುವಂತೆ ಮಾಡಿದರು. ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ಈಗಲೂ ಮಕ್ಕಳು ಆಕೆಯ ಬಳಿಯೇ ಇದ್ದಾರೆ. ನನ್ನ ಬಳಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ಇಂಥಹ ಒಳ್ಳೆಯ ಮಕ್ಕಳಿರುವಾಗ ಗಲಾಟೆ ಏಕೆ ಎಂದರೂ ಕೇಳುತ್ತಿಲ್ಲ. ಮಕ್ಕಳ ಈವರೆಗಿನ ಎಲ್ಲ ಜವಾಬ್ದಾರಿಯನ್ನು ನಾನೇ ನೋಡಿಕೊಂಡಿದ್ದೇನೆ ಎಂದಿದ್ದಾರೆ.
ಅಲ್ಲದೇ ಚೈತ್ರಾಗೆ ಹಣದ ದುರಾಸೆ ಹೆಚ್ಚಾಗಿದೆ. ಒಮ್ಮೆಲೆ 25 ಕೋಟಿ ಹಣ ಕೊಡಿ ಎಂದು ಕೇಳುತ್ತಿದ್ದಾಳೆ. ಕೋರ್ಟ್ಗೆ ಹೋದಾಗ ನನಗೆ ಅಷ್ಟು ಲಕ್ಷ ಬೇಕು, ಇಷ್ಟು ಲಕ್ಷ ಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ನನಗೆ ಐಶಾರಾಮಿ ಜೀವನ ಅಭ್ಯಾಸವಾಗಿದೆ, ನನಗೆ ಹೆಚ್ಚು ಹಣ ಬೇಕು ಎಂದು ಚೈತ್ರಾ ನ್ಯಾಯಾಲಯದಲ್ಲಿಯೇ ಹೇಳಿಕೊಂಡಿದ್ದಾರೆ. ಈಗ, ಆಕೆ ಮಾತ್ರವಲ್ಲ, ಆಕೆಯ ಸಹೋದರರು ಬಂದು ನನ್ನ ಬಳಿ ಹಣ ಕೇಳುತ್ತಿದ್ದಾರೆ ಎಂದಿದ್ದಾರೆ.