ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
NDA ಸೂಚಿತ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ವರ್ಮಾ ಅವರ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಎನ್.ಡಿ.ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಎಂದು ಘೋಷಿಸುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು, ಎಲ್ಲದಕ್ಕಿಂತ ಕೌರವರು ಯಾರು” ಎಂದು ಅವಹೇಳನ ಮಾಡುವಂತೆ ಟ್ವಿಟ್ ಮಾಡಿದ್ದರು.
ಈ ಟ್ವಿಟ್ ಇದೀಗ ದ್ರೌಪದಿ ಮುರ್ಮು ಬೆಂಬಲಿಗರನ್ನು ಕೆರಳಿಸಿದೆ. ಹಾಗಾಗಿ ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ. ನಂದೇಶ್ವರ ಗೌಡ ಅವರು ಹೈದರಾಬಾದ್ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ, ಆಂಧ್ರದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಾಗುತ್ತಿವೆ. ಟ್ವೀಟ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಕೂಡ ಅವರ ವಿರುದ್ಧ ವಾಗ್ದಾಳಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ವರ್ಮಾ ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ದ್ರೌಪದಿ ನನಗೆ ಇಷ್ಟವಾದ ಪಾತ್ರ. ಹಾಗಾಗಿ ನಾನು ವ್ಯಂಗ್ಯ ಮಾಡಿದೆ. ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರು ಕಡಿಮೆ. ಈ ಹೆಸರು ಕೇಳಿದಾಕ್ಷಣ ನನಗೆ ಮಹಾಭಾರತದ ದ್ರೌಪದಿ ನೆನಪಾದರು. ಈ ರೀತಿ ಟ್ವಿಟ್ ಮಾಡುವುದರ ಹಿಂದೆ ಯಾವುದೇ ಕೆಟ್ಟ ಉದ್ದೇಶವಿಲ್ಲ’ ಎಂದಿದ್ದಾರೆ.