ಒಬ್ಬ ಸೇಲ್ಸ್ಮ್ಯಾನ್ ಆಗಿ, ಜಲಿಯನ್ ವಾಲಾಬಾಗ್ ದುರಂತದ ನರಹಂತಕ ಜನರಲ್ ಮೈಕಲ್ ಓ ಡಯರ್ನನ್ನು ಆಂಗ್ಲರ ನೆಲದಲ್ಲಿ ಭೇಟಿ ಮಾಡುವ ಉದಮ್ ಸಿಂಗ್ ದುಬಾರಿ ಪೆನ್ ಒಂದನ್ನು ಅವನಿಗೆ ಕೊಡುತ್ತಾನೆ.
“ಇದರ ಬೆಲೆ ಎಷ್ಟು?” ಡಯರ್ ಕೇಳುತ್ತಾನೆ.
ಉದಮ್ ಸಿಂಗ್ ಹೇಳುತ್ತಾನೆ.. “ಫ್ರೀ ಸರ್.. ನಿಮಗೆ”.
“ಫ್ರೀ..! ನನಗೆ?” ಡಯರ್ ವಿಚಿತ್ರವಾಗಿ ನೋಡುತ್ತಾನೆ.
“ಹೌದು ಸರ್ ನಿಮಗೆ ಫ್ರೀ, ನನಗೆ ನೀವು ಗೊತ್ತು, ನಾನು ನಿಮ್ಮ ಆಡಳಿದಲ್ಲಿ ಕೆಲಸ ಮಾಡಿದವನು.. ಫ್ಯಾಕ್ಟರಿಯಲ್ಲಿ, ರೈಲ್ವೆಯಲ್ಲಿ.. ಕೆಲಸ ಮಾಡಿದವನು ನಾನು.. ಇಂಡಿಯಾದಲ್ಲಿ ಸರ್!” ಎಂದು ಹೇಳುತ್ತಾನೆ ಯುವಕ ಉದಮ್.
ಅದಕ್ಕೆ ಜನರಲ್ ಡಯರ್ ಈ ಕೆಳಗಿನ ಮಾತುಗಳನ್ನು ಉದಮ್ಗೆ ಹೇಳುತ್ತಾನೆ.. “ಓಹ್ ಇಂಡಿಯಾ..! ಕೆಟ್ಟ ಫುಡ್, ಉತ್ತಮ ವೆದರ್, ಅದೇ ರೀತಿ ಅಲ್ಲಿಯ ಜನರು.. ಅಲ್ಲಿಯ ಜನರು ಕೂಡ ತುಂಬಾ ಸಾಮಾನ್ಯ ಜನರು, ವೆರಿ ಆರ್ಡಿನರಿ ಪೀಪಲ್ಸ್. ಅಲ್ಲಿಯ ಜನರಿಗೆ ಇದೊಂದು ಅಭ್ಯಾಸ. ನಮ್ಮಂತಹ ಆಂಗ್ಲರನ್ನು ಈ ರೀತಿಯಾಗಿ ಏನಾದರೂ ನೀಡಿ ಖುಷಿ ಪಡಿಸುವುದು, ಅವರಿಗೆ ಅದನ್ನು ಬಿಟ್ಟು ಬೇರೆ ಏನೂ ಗೊತ್ತಿಲ್ಲ.. ಅಷ್ಟು ಮಾತ್ರವಲ್ಲ ನಮ್ಮ ವಿರುದ್ಧ ಅವರು ಎಂದೂ ತಿರುಗಿ ಬಿದ್ದೇ ಇಲ್ಲ.”
..ಆದರೆ ನಾನು ಮಾತ್ರ ಅಲ್ಲಿ ನನ್ನ ಕೆಲಸವನ್ನು ಈ ಬಿಟ್ರಿಷ್ ಸಾಮ್ರಾಜ್ಯಕ್ಕಾಗಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂಬ ನೆಮ್ಮದಿ ನನಗಿದೆ..!” ಎಂದು ಹೇಳಿ ಮುಗಿಸುತ್ತಾನೆ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ಪ್ರಮುಖ ರೂವರಿ ಈ ಜನರಲ್ ಮೈಕಲ್ ಓ ಡಯರ್..!
ಬಹುಶಃ ಉದಮ್ಗೆ ಆಗಲೇ ಅವನೆದೆಗೊಂದು ಬುಲ್ಲೆಟ್ ಇಳಿಸಬೇಕು ಎಂದು ಅನ್ನಿಸಿದ್ದರೆ ಅದರಲ್ಲಿ ಚ್ಚರಿ ಪಡುವಂತದ್ದೇನಿಲ್ಲ. ಉದಮ್ ಮುಂದೆ ಜನರಲ್ ಡಯರ್ನ ಮನೆಯಲ್ಲಿಯೇ ಒಂದಿಷ್ಟು ಕೆಲಸ ಬೇಕೆಂದೇ ಮಾಡುತ್ತಾನೆ. ಅವನ ಬೂಟ್ ಫಾಲಿಶ್ ಮಾಡುವಾಗ, ಅವನ ಗ್ಲಾಸಿಗೆ ವೈನ್ ಸುರಿವಾಗ ಉದಮ್ ಪ್ರತೀ ಬಾರಿಯೂ ಕೇಳುತ್ತಾನೆ.. “ಸರ್, ನಿಮಗೆ ಜಲಿಯನ್ ವಾಲಾ ಭಾಗ್ ಘಟನೆಯ ಬಗ್ಗೆ ಒಂಚೂರು ಖೇದವಿಲ್ಲವೇ.. ಸ್ವಲವೂ ಬೇಜಾರಿಲ್ಲವೇ?”
ಡಯರ್ಗೆ ಎಂದಿಗೂ ಎಳ್ಳಷ್ಟೂ ಪಶ್ಚಾತಾಪ ಎದೆಯಲ್ಲಿ ಹುಟ್ಟಲೇ ಇಲ್ಲ. ಉದಮ್ ಕೇಳಿದಾಗಲೆಲ್ಲ. ನಾನು ಮಾಡಿದ್ದೇ ಸರಿ, ಪ್ರತಿರೋಧ ತೋರಿದ ಆ ರೆಬೆಲ್ ಭಾರತಿಯರಿಗೆ ಹಾಗೇ ಆಗಬೇಕಿತ್ತು ಎಂದು ಉಡಾಫೆಯಾಗಿ ಉತ್ತರಿಸುತ್ತಾನೆ. ಆಗಲೂ ಉಧಮ್ ಕೈಯಲ್ಲಿ ಪಿಸ್ತೂಲ್ ಏನೋ ಅವಶ್ಯವಾಗಿ ಇತ್ತು. ಮನಸ್ಸು ಮಾಡಿದ್ದರೆ ಡಯರ್ನ ಮನೆಯಲ್ಲಿಯೇ ಆ ರೂಮಿನೊಳಗೆ ಅವನೆದೆಗೊಂದು ಬುಲ್ಲೆಟ್ ನುಗ್ಗಿಸುವುದು ಉದಮ್ಗೆ ಕಷ್ಟದ ವಿಷಯವೇ ಆಗಿರಲಿಲ್ಲ. ಆದರೆ ಅವನು ಹಾಗೆ ಮಾಡಲಿಲ್ಲ. ಜಲಿಯನ್ ವಾಲಾಭಾಗ್ನಲ್ಲಿ ಅಸಹಾಯಕ ಮಹಿಳೆಯರು, ಮಕ್ಕಳು, ವೃದ್ಧರು, ರೋಗಿಗಳು ಎನ್ನದೇ ಸಾರ್ವಜನಿಕ ನರಮೇದಕ್ಕೆ ಆದೇಶ ನೀಡಿದ ಪರಮ ಪಾಪಿಗೆ ಎಲ್ಲರೆದುರೇ ಗುಂಡು ಹೊಡೆದು ನಿರ್ದಾಕ್ಷಿಣ್ಯವಾಗಿ ಸಾಯಿಸಬೇಕು ಮತ್ತು ಅವನ ಸಾವಿನ ಕಾರಣ ಜಗತ್ತಿಗೆ ಗೊತ್ತಾಗಬೇಕು ಎಂದು ಉದಮ್ ನಿರ್ಧರಿಸಿ ಅದಾಗಲೇ ಬಹಳ ಸಮಯವಾಗಿತ್ತು.
ಕೊನೆಗೂ ಸರ್ದಾರ್ ಉದಮ್ ಗುಂಡು ಹೊಡೆಯುತ್ತಾನೆ, ಒಂದಲ್ಲ.. ಬೇರೊಬ್ಬರಿ 6 ಗುಂಡುಗಳನ್ನು ಎಲ್ಲರೆದುರೇ ಡಯರ್ನ ಎದೆಗಿಳಿಸಿ ಅವನನ್ನು ಹೆಣವಾಗಿಸಿ ಮಲಗಿಸಿ ಬಿಡುತ್ತಾನೆ ಹಿಂದೂಸ್ತಾನ್ ಸೋಶಿಯಲ್ ರಿಪಬ್ಲಿಕ್ ಆರ್ಮಿ ಸಂಘಟನೆಯ ಮಿಂಚು. ಆ ಪ್ರತೀಕಾರಕ್ಕೆ ಒಂದು ಬಲವಾದ ಕಾರಣವಿದೆ. ಯಾರದ್ದೇ ಆಗಲಿ ರಕ್ತ ಕೊತ ಕೊತ ಎಂದು ಕುದಿಯಬೇಕು ಎಂಬಂತಹ ಕಾರಣವದು. ಜಲಿಯನ್ ವಾಲಾ ಭಾಗ್ ಎಂಬ ರಕ್ತದ ಮಡುವನ್ನು ಕಣ್ಣಾರೆ ಕಂಡವನು ಈ ಹುಡುಗ ಉದಮ್. ಚಿತ್ರದಲ್ಲಿ ಜಲಿಯನ್ ವಾಲಾ ಭಾಗ್ ದುರಂತವನ್ನು ಎಳೆ ಎಳೆಯಾಗಿ ತೋರಿಸಿದ್ದಾರೆ. ಅಂದಿನ ಆ ನರಕಸದೃಶ್ಯ ಮಾರಣಹೋಮ ಮತ್ತು ರಕ್ತದೋಕುಳಿಯನ್ನು ಮೃದುಮನಸಿನ ಯಾರೂ ನೋಡಲು ಸಾಧ್ಯವಿಲ್ಲ. ನೊಡುವ ನಮ್ಮೊಳಗೆ ಕೂಡ ಒಂದು ಆಕ್ರಂದನ ಮೊಳಗದಿದ್ದರೆ ಬಹುಶಃ ನಾವು ಭಾರತೀಯರು ಮಾತ್ರವಲ್ಲ.. ಮನುಷ್ಯರು ಅಲ್ಲವೇನೋ. ನಮ್ಮ ಕಣ್ಣಿನಿಂದ ಕಣ್ಣೀರು ಅಲ್ಲ ರಕ್ತ ಜಿನುಗುತ್ತದೆ. ಆ ಅಮಯಾಕರ ವಿನಾಕಾರಣ ಬಲಿದಾನ ಬ್ರಿಟೀಶ್ ವ್ಯವಸ್ಥೆ ನಮ್ಮ ನೆಲಕ್ಕೆ ಮಾಡಿದ ಮಹಾಪಾತಕ. ಈ ದೇಶದ ಅಮರಸೇನಾನಿಗಳ ತ್ಯಾಗ ಬಲಿದಾನಗಳು ದೊಡ್ಡದು. ಅದನ್ನು ದೃಶ್ಯಗಳಲ್ಲಿ ಎಳೆ ಎಳೆಯಾಗಿ ತೆರೆದಿಡುವ ಚಿತ್ರವೇ ಸರದಾರ್ ಉದಮ್. ಶೂಜಿತ್ ಸರ್ಕಾರ್ ನಿರ್ದೇಶನದ ಈ ಚಿತ್ರದಲ್ಲಿ ಸರದಾರ್ ಉದಮ್ ಪಾತ್ರದಾರಿಯಾಗಿ ವಿಕ್ಕಿ ಕೌಶಲ್ ಮನಮುಟ್ಟುವ ಅಭಿನಯ ಮಾಡಿದ್ದಾರೆ. ಚಿತ್ರದಲ್ಲಿ ಉದಮ್ ಭಗತ್ ಸಿಂಗ್ನನ್ನು ನೆನಪಿಸಿಕೊಳ್ಳುವ ದೃಶ್ಯಗಳು ನಿಜಕ್ಕೂ ಕಣ್ಣಂಚು ಒದ್ದೆಯಾಗಿಸುತ್ತದೆ. ಭಗತ್ ಸಿಂಗ್ ತನ್ನ ಕ್ರಾಂತಿಕಾರಕ ಭೂಗತ ಕಾರ್ಯಾಚರಣೆಯ ದಿನಗಳಲ್ಲಿ ಈಕ್ವಾಲಿಟಿ ಬಗ್ಗೆ ಮಾತಾಡುವುದು ಮತ್ತು ಸ್ವಾತಂತ್ರ್ಯ ಬಂದ ನಂತರ ಮಾಡುವ ಕೆಲಸದ ಕುರಿತು “ಆಜಾದಿ ಮಿಲನೇ ಕೇ ಬಾದ್ ಗೋರೋಂಕಿ ಮೆಹಂಗೀ ವೈನ್ ಪಿಲಾವೂಂಗಾ, ಘರ್ ಜಾಕೆ ಸೋ ಜಾವೂಂಗಾ, ಫಿರ್ ಅಗಲಾ ದಿನ್ ಉಟ್ಕರ್ ನಹಾವೂಂಗಾ, ರೋಟೀ ಕಾಖೆ ಸೀ ಜಾವೂಂಗಾ” ಎಂದು ಹಾಸ್ಯ ಚಟಾಕಿ ಹಾರಿಸುವ ದೃಶ್ಯ ನೋಡುಗರಿಗೆ ಇಷ್ಟವಾಗುತ್ತದೆ.
ಅಮೇಜಾನ್ ಪ್ರೈಮ್ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಸಾಧ್ಯವಾದರೆ ನಿಮ್ಮ ಮಕ್ಕಳನ್ನು ಕೂರಿಸಿಕೊಂಡು ನೋಡಿ. ನಮ್ಮ ಮುಂದಿನ ಪೀಳಿಗೆಯ ಯುವಕರಿಗೆ ದೇಶಕ್ಕಾಗಿ ಜೀವ ಕೊಟ್ಟ ವೀರರ ಕಥೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಚಿತ್ರ ಖಂಡಿತಾ ನೆರವಾಗುತ್ತದೆ. ಸರದಾರ್ ಉದಮ್ ಡಯರ್ನ ಹತ್ಯೆಗಾಗಿ ಮಾಡಿಕೊಳ್ಳುವ ಸಿದ್ಧತೆ, ಅವನ ಮನಸ್ಥಿತಿ, ಅವನ ತಹತಹಿಕೆಗಳು ರೋಚಕವಾಗಿ ಅನಾವರಣಗೊಳ್ಳುತ್ತವೆ. ನೇಣಿಗೇರುವ ಮೊದಲು ಬ್ರಿಟಿಷ್ ಅಧಿಕಾರಿಗೆ ಉದಮ್ ಹೀಗೆ ಹೇಳುತ್ತಾನೆ. “ನನಗೆ 18 ತುಂಬಿದಾಗ ನನ್ನ ಗುರುಗಳು ಹೇಳಿದ್ದರು, ಮಗು. ಯೌವನ ಎಂಬುದು ಭಗವಂತ ಕೊಟ್ಟ ಉಡುಗೊರೆ. ಆದರೆ ಅದನ್ನು ಹಾಗೇ ಹೋಗಲು ಬಿಟ್ಟು ಬಿಡುತ್ತಿಯೋ ಅಥವಾ ಅದಕ್ಕೊಂದು ಅರ್ಥ ಬರುವಂತೆ ಮಾಡುತ್ತಿಯೋ ಎಂಬುದು ನಿನ್ನ ಕೈಯಲ್ಲಿಯೇ ಇದೆ. ಈಗ ಮೇಲೆ ಹೋಗಿ ಅವರನ್ನು ಅವಶ್ಯವಾಗಿ ಕೇಳುತ್ತೇನೆ. ನನ್ನ ಯೌವನಕ್ಕೆ ಈಗ ಏನಾದರೊಂದು ಅರ್ಥ ಸಿಕ್ಕಿದೆಯೇ ಗುರುಗಳೇ ಅಥವಾ ಅದು ಹಾಗೇ ವ್ಯರ್ಥವಾಗಿ ಹೋಯಿತೇ ಎಂದು!”
ಸರ್ದಾರ್ ಉದಮ್ ತನ್ನ ಹದಿಹರಯದಲ್ಲಿ ಕಂಡ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ, ಅವನಲ್ಲಿ ಎಂದಿಗೂ ವಾಸಿಯಾಗಲಾಗದ ಗಾಯ ಮಾಡಿರುತ್ತದೆ. ಅವನು ಪಂಜಾಬನ್ನು ತೊರೆದು ಆಫ್ಘಾನಿಸ್ತಾನಕ್ಕೆ ಹೋಗಿ, ಅಲ್ಲಿಂದ ಲಂಡನ್ ನಗರವನ್ನು ಸುಮಾರು 1933-34ರಲ್ಲಿ ಸೇರುತ್ತಾನೆ. ಸುಮಾರು 6 ವರ್ಷಗಳವರೆಗೆ, ಲಂಡನ್ನಿನಲ್ಲಿ ಕಾಲಕಳೆಯುವ ಉದಮ್, ಹತ್ಯಾಕಾಂಡದ ಗಾಯವು ವಾಸಿಯಾಗದಂತೆ ಅದನ್ನು ಹಸಿಯಾಗಿಯೇ ಇಟ್ಟುಕೊಂಡಿರುತ್ತಾನೆ. ಅವನ ನಿಜವಾದ ಹೆಸರೇನು ಎನ್ನುವ ಗೊಂದಲ ತನಿಖಾಧಿಕಾರಿಗಳಿಗೆ. ಯಾಕಂದರೆ ಅವನಲ್ಲಿ ಉದಿ ಸಿಂಗ್, ಉದಮ್ ಸಿಂಗ್, ಶೇರ್ ಸಿಂಗ್ ಎನ್ನುವ ಹೆಸರಿನ ಪಾಸ್ಪೋರ್ಟ್ಗಳಿರುತ್ತವೆ. 13 ಮಾರ್ಚ್, 1940ರಂದು, ಅಂದರೆ ಹತ್ಯಾಕಾಂಡವು ನಡೆದು 21 ವರ್ಷಗಳಾದ ನಂತರ, ಅದಕ್ಕೆ ಕಾರಣನಾದ ಮೈಕೇಲ್ ಓ’ಡಯರ್ನನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ!. ತನ್ನ ನಿಜವಾದ ಹೆಸರನ್ನು ಆಜಾದಿ ರಾಮ್ ಮೊಹಮದ್ ಸಿಂಗ್ ಎಂದು ಕೋರ್ಟ್ನಲ್ಲಿ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಕೂಗಿ ಹೇಳುವ ಉದಮ್, ತನ್ಮೂಲಕ ನಮ್ಮದು ಸರ್ವಧರ್ಮೀಯರ ಸಮನ್ವಯದ ಸಹಬಾಳ್ವೆಯ ಸಹಮತದ ಸ್ವಾತಂತ್ರ್ಯ ಹೋರಾಟ ಎಂದು ಸಾರುತ್ತಾನೆ. ನ್ಯಾಯಾಧೀಶನ ಮುಂದೆಯೇ ಉಚ್ಛ ಧ್ವನಿಯಲ್ಲಿ ಇನ್ಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗುತ್ತಾನೆ. ನಮ್ಮ ಸ್ವಾತಂತ್ರ್ಯ ಹೋರಾಟದ ರಕ್ತಸಿಕ್ತ ಅಧ್ಯಾಯದ ಒಂದು ಭಾಗ ಶಹೀದ್ ಸರದಾರ್ ಉದಮ್ ಸಿಂಗ್. 16 ಅಕ್ಟೋಬರ್, 2021ರಿಂದ ಅಮೇಜ಼ಾನ್ ಪ್ರೈಮ್ನಲ್ಲಿ ಲೋಕಾರ್ಪಣೆಯಾಗಿರುವ ಅದ್ಬುತ ಚಿತ್ರ ಐ.ಎಂ.ಡಿ.ಬಿ ಮೌಲ್ಯಮಾಪನದಲ್ಲಿ ಹತ್ತಕ್ಕೆ ಒಂಬತ್ತು ಅಂಕ ಗಳಿಸಿದೆ.
-ಎ.ಬಿ ಪಚ್ಚು, ಹವ್ಯಾಸಿ ಬರಹಗಾರ ಮೂಡಬಿದ್ರಿ