“ಕೂಸಿದ್ದಾಗಲೇ ಕ್ಯಾಮರಾ ಎದುರಿಸಿದ, ೧೦ನೇ ವರ್ಷಕ್ಕೆ ರಾಷ್ಟ್ರಪ್ರಶಸ್ತಿ ಪಡೆದ, ಆದರೆ ವಿಧಿಯ ಕ್ರೌರ್ಯಕೆ ಶರಣಾಗಿ ಅರ್ಧಶತಕ ಮೀರದೆ ಶೋ ಮುಗಿಸಿಬಿಟ್ಟ”
ಹಸುಗೂಸಿದ್ದಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರತಿಭಾವಂತ ಪುನೀತ್ ರಾಜ್ಕುಮಾರ್. ಹಾಗೆ ನೋಡಿದರೆ ಪುನೀತ್ ಅಭಿನಯದ ಮೊತ್ತಮೊದಲ ಚಿತ್ರ ರಾಜ್ಕುಮಾರ್ ಅಭಿನಯದ ಪ್ರೇಮದ ಕಾಣಿಕೆ. ಆಗ ಪುನೀತ್ ಒಂಭತ್ತು ತಿಂಗಳ ಮಗು. 1975 ಮಾರ್ಚ್ 17ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ, 1976 ಫೆಬ್ರವರಿ 28ರಂದು ತೆರೆಕಂಡಿತ್ತು. ವಿ. ಸೋಮಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ಆರತಿ, ಜಯಮಾಲ ಅಭಿನಯಿಸಿದ್ದರು. ಜಯದೇವಿ ಫಿಲ್ಸ್ಮ್ ಅಡಿ ನಿರ್ಮಾಣವಾಗಿದ್ದ ಈ ಚಿತ್ರ ನಂತರ ಸೂಪರ್ ಹಿಟ್ ಆಗಿತ್ತು.
1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರ ಪುನೀತ್ ವೃತ್ತಿ ಬದುಕಿನ ಮೈಲಿಗಲ್ಲು. ಈ ಸಿನಿಮಾದ ಅದ್ಭುತ ಅಭಿನಯಕ್ಕಾಗಿ ಪುನೀತ್ ರಾಷ್ಟ್ರಪ್ರಶಸ್ತಿ ಒಲಿಸಿಕೊಂಡಿದ್ದರು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿಯೂ ಪುನೀತ್ ಅವರ ಅಮೋಘ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ದೊರೆತಿತ್ತು.
ಬಾಲನಟನಾಗಿ ಮಾಸ್ಟರ್ ಲೋಹಿತ್ ಯಾನೆ ಪುನೀತ್ ಭಾಗ್ಯವಂತ, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಭಕ್ತ ಪ್ರಹ್ಲಾದ, ವಸಂತ ಗೀತ ಚಿತ್ರಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಮಾಡಿ ಆಗಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಈ ಹುಡಗನಿಗೆ ಅದ್ಭುತ ಭವಿಷ್ಯವಿದೆ ಎಂದಿದ್ದರಂತೆ ಖ್ಯಾತ ನಿರ್ಮಾಪಕ ವೀರಾಸ್ವಾಮಿ (ಕನಸುಗಾರ ರವಿಚಂದ್ರನ್ ಅವರ ತಂದೆ)
ಪೂರ್ಣ ಪ್ರಮಾಣದ ನಾಯಕ ನಟನಾಗಿ ಚಂದನವನಕ್ಕೆ ಪುನೀತ್ ಕಾಲಿಟ್ಟಿದ್ದು 2002ರಲ್ಲಿ ಚಿತ್ರಲೋಕಕ್ಕೆ ಲೋಕಾರ್ಪಣೆಗೊಂಡ ʻಅಪ್ಪು’ ಚಿತ್ರದ ಮೂಲಕ. ನಂತರ 2002ರಲ್ಲಿ ʻಅಭಿ’, 2004ರಲ್ಲಿ ʻವೀರಕನ್ನಡಿಗ’ ಹಾಗೂ ‘ಮೌರ್ಯ’, 2005ರಲ್ಲಿ ʻಆಕಾಶ್’ ಮತ್ತು ʻನಮ್ಮ ಬಸವ’ 2006ರಲ್ಲಿ ʻಅಜಯ್’ 2007ರಲ್ಲಿ ʻಅರಸು’ ಹಾಗೂ ‘ಮಿಲನ’, 2008ರಲ್ಲಿ ʻಬಿಂದಾಸ್’ ಮತ್ತು ʻವಂಶಿ’, 2009ರಲ್ಲಿ ʻರಾಜ್ ದ ಶೋ ಮ್ಯಾನ್’ ಮತ್ತು ʻಪೃಥ್ವಿ’, 2010ರಲ್ಲಿ ʻರಾಮ್’ ಮತ್ತು ʻಜಾಕಿ’, 2011ರಲ್ಲಿ ʻಹುಡುಗರು’ ಹಾಗೂ ʻಪರಮಾತ್ಮ’, 2012ರಲ್ಲಿ ʻಅಣ್ಣಾಬಾಂಡ್’ ಹಾಗೂ ʻಯಾರೇ ಕೂಗಾಡಲಿ’, 2014ರಲ್ಲಿ ʻನಿನ್ನಿಂದಲೇ’, 2015ರಲ್ಲಿ ʻಮೈತ್ರಿ’, ʻಪವರ್’ ಮತ್ತು ‘ರಣವಿಕ್ರಮ’ 2016ರಲ್ಲಿ ʻಚಕ್ರವ್ಯೂಹ’ ಮತ್ತು ʻದೊಡ್ಮನೆ ಹುಡುಗ’ 2017ರಲ್ಲಿ ‘ರಾಜಕುಮಾರʼ ಮತ್ತು ʻಅಂಜನಿ ಪುತ್ರ’, 2019 ರಲ್ಲಿ ʻನಟಸಾರ್ವಭೌಮ’, 2021ರಲ್ಲಿ ʻಯುವರತ್ನʼ, ಚಿತ್ರಗಳಲ್ಲಿ ನಟಿಸಿ ತಮ್ಮ ನೆನಪನ್ನು ಜನಮಾನಸದಲ್ಲಿ ಹಚ್ಚ ಹಸಿರಾಗಿಸಿದ್ದಾರೆ.
ಜೇಮ್ಸ್ ಹಾಗೂ ಮತ್ತೊಂದು ದ್ವಿತ್ವ ಎಂಬ ಎರಡು ಸಿನಿಮಾಗಳಲ್ಲಿ ಪುನೀತ್ ನಟಿಸಬೇಕಿತ್ತು. ಇದರಲ್ಲಿ ಜೇಮ್ಸ್ ಚಿತ್ರೀಕರಣದ ಹಂತದಲ್ಲಿತ್ತು. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣದ ದ್ವಿತ್ವ ಸಿನಿಮಾಗೆ ಲೂಸಿಯಾ ಪವನ್ ಕುಮಾರ್ ಆ್ಯಕ್ಷನ್ ಕಟ್ ಹೇಳಬೇಕಿತ್ತು. ಕೆಲ ಸಮಯದ ಹಿಂದೆಯಷ್ಟೆ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು, ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು. ಮತ್ತೆ ಬಾರದ ಲೋಕಕ್ಕೆ ಪುನಿತ್ ಪ್ರಯಾಣ ಬೆಳೆಸಿದ್ದಾರೆ.
-ವಿಭಾ