ಕನ್ನಡ ನಾಡಿನ ಪ್ರಗತಿಪರ ವಿಚಾರಧಾರೆಯ ಮತ್ತೊಂದು ಕೊಂಡಿ ಕಳಚಿಕೊಂಡಿದೆ. ತಾವು ನಂಬಿದ್ದ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದ, ಕಂಚಿನ ಕಂಠದ, ಮುಂಗೋಪದಲ್ಲಿ ಜಮದಗ್ನಿಯ ಅಪರಾವತಾರದಂತೆ ಕಾಣಿಸುತ್ತಿದ್ದ ಮತ್ತು ಸದಾ ನೊಂದವರಿಗಾಗಿ ಮಿಡಿಯುತ್ತಿದ್ದ ಮಾತೃ ಹೃದಯಿ, ರಂಗಕರ್ಮಿ, ಸಾಹಿತಿ, ಚಿಂತಕ, ನಟ ಪ್ರೊ. ಜಿ.ಕೆ ಗೋವಿಂದರಾವ್ ಇನ್ನು ಕೇವಲ ನೆನಪು ಮಾತ್ರ. 84 ವರ್ಷದ ಜಿ.ಕೆ ಗೋವಿಂದರಾವ್ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ವಯೋಸಹಜ ಕಾಯಿಲೆಯ ಕಾರಣ ಇಹಲೋಕದ ವ್ಯಾಪಾರ ಮುಗಿಸಿ ನಡೆದಿದ್ದಾರೆ. ತಮ್ಮ ನಿಧನದ ನಂತರ ಕಣ್ಣುಗಳನ್ನು ದಾನ ಮಾಡಬೇಕು ಎಂದು ಮೊದಲೇ ನಿರ್ಧರಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ ಜಿಕೆಜಿ.
ಜಿ.ಕೆ. ಗೋವಿಂದರಾವ್, ಮಾನವೀಯತೆಯ ಗಟ್ಟಿನೆಲದ ಸಾಕ್ಷಿಪ್ರಜ್ಞೆ, ತಮ್ಮದೇ ಆದ ವೈಚಾರಿಕ ವಲಯವನ್ನು ಸೃಷ್ಟಿಸಿಕೊಂಡು ತನ್ಮುಖೇನ ಪ್ರಭುತ್ವದ ದಬ್ಬಾಳಿಕೆ, ಅನ್ಯಾಯ, ಕೋಮುವಾದ, ಉಳ್ಳವರ ಅನಾಚಾರಗಳ ವಿರುದ್ಧ ಜನರನ್ನು ಸಂಘಟಿಸುತ್ತಾ ಬಂದವರು. ಸಮಕಾಲೀನ ಜ್ವಲಂತ ಸಮಸ್ಯೆಗಳಿಗೆ ಧನಿಗೂಡಿಸುತ್ತಾ, ಜನಪರ ಆಂದೋಲನಗಳ ಮೂಲಕ ಸುದ್ದಿಮನೆಯಲ್ಲಿ ಚಾಲ್ತಿಯಲ್ಲಿದ್ದವರು. ಯಾವತ್ತೂ ಜನಪರ ನಿಲುವನ್ನು ಯಾವುದೇ ವೇದಿಕೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ ನಿರ್ಭೀಡೆಯಿಂದ ವ್ಯಕ್ತಪಡಿಸುತ್ತಾ ಬಂದವರು.
ಪ್ರೊ. ಜಿ.ಕೆ. ಗೋವಿಂದ ರಾವ್ ಜನಿಸಿದ್ದು ಬೆಂಗಳೂರಿನಲ್ಲೆ, 1937ರ ಏಪ್ರಿಲ್ 27ರಂದು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿ ನಂತರ ಇಂಗ್ಲಿಷ್ ಪ್ರಾಧ್ಯಾಪಕರಾದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ರಂಗಭೂಮಿ ಹಾಗೂ ಸಿನಿಮಾ, ಕಿರುತೆರೆ ಕ್ಷೇತ್ರದೊಂದಿಗೂ ಅತ್ಯುತ್ತಮ ಒಡನಾಟ ಹೊಂದಿದ್ದ ಜಿಕೆಜಿಯವರದ್ದು ಸದಾ ಕ್ರಿಯಶೀಲ ಮನಸ್ಸು. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಜಿಕೆಜಿ ಮತ್ತು ಚಂದ್ರಹಾಸ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಒಂದೇ ಅಧ್ಯಾಪಕರ ಕೊಠಡಿಯಲ್ಲಿ ಇದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಅವರ ಶಿಷ್ಯರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಗೋವಿಂದ್ರಾವ್ ಅವರು ಬಹುಪ್ರಸಿದ್ಧ ಅಧ್ಯಾಪಕರಾಗಿದ್ದರಂತೆ. ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರಾಗಿದ್ದ ಸಂದರ್ಭದಲ್ಲಿ ಪ್ರೊ ಜಿ ಕೆ ಗೋವಿಂದ್ ರಾವ್ ಅಲ್ಲಿ ಇಂಗ್ಲೀಷ್ ಅಧ್ಯಾಪಕರು ಹಾಗೂ ಚಂದ್ರಶೇಖರ್ ಕಂಬಾರ್ ಕನ್ನಡ ಅಧ್ಯಾಪಕರೂ ಆಗಿದ್ದರು. ತಮ್ಮ ಅಧ್ಯಾಪನದ ವೈಶಿಷ್ಟ್ಯದಿಂದ ಅವರು ಅಸಂಖ್ಯ ವಿದ್ಯಾರ್ಥಿಗಳ ಪ್ರೀತಿಯ ಮೇಸ್ಟ್ರು ಎಂದೇ ಗುರುತಿಸಿಕೊಂಡಿದ್ದರು. ಅದರಲ್ಲೂ ರಂಗಭೂಮಿ ಮತ್ತು ಶೇಕ್ಸ್ಪಿಯರ್ ನಾಟಕಗಳ ಕುರಿತಾಗಿ ಗಂಟೆಗಟ್ಟಲೇ ತನ್ಮಯರಾಗಿ ನಿರರ್ಗಳರಾಗಿ ಮಾತಾಡುವ ಪಾಂಡಿತ್ಯ ಅವರಿಗಿತ್ತು.
ಈಶ್ವರ ಅಲ್ಲಾ ಎನ್ನುವ ಕಿರುಕಾದಂಬರಿ, ಶೇಕ್ಸ್ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್ಪಿಯರ್ ಸಂವಾದ ಎಂಬ ವಿಮರ್ಶಾ ಲೇಖನಗಳ ಸಂಗ್ರಹ, ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಆಲಯ ಬಯಲು, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? ಎಂಬ ಸಂಕೀರ್ಣ ಬರಹ ಸಂಗ್ರಹಗಳು ಇತ್ಯಾದಿ ಜಿ.ಕೆ ಗೋವಿಂದರಾವ್ ಅವರ ಕೆಲವು ಕೃತಿಗಳು. ಪುಟ್ಟಣ್ಣ ಕಣಗಾಲರ ಕಥಾ ಸಂಗಮ ಜಿಕೆಜಿ ಅಭಿನಯಿಸಿದ ಮೊದಲ ಚಿತ್ರ. ಸೂಪರ್ಸ್ಟಾರ್ ತಲೈವ ರಜನಿಕಾಂತ್ ಅಭಿನಯದ ಮೊದಲ ಚಿತ್ರದಲ್ಲಿಯೂ ಅವರು ಬಣ್ಣ ಹಚ್ಚಿದ್ದರು. ಹಂಗು, ಬಂಧನ, ಕಾಲೇಜು ರಂಗ, ಡಾ.ಕೃಷ್ಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ಶಾಸ್ತ್ರಿ, ಗೃಹಣ, ಭೂಮಿ ತಾಯಿಯ ಚೊಚ್ಚಲ ಮಗ, ಕಾನೂರು ಹೆಗ್ಗಡತಿ, ನಿಶ್ಯಬ್ಧ, ರೇ.. ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಹಾಗೂ ಮಾಲ್ಗುಡಿ ಡೇಸ್, ಮಹಾಪರ್ವ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಅದಕ್ಕೂ ಮೊದಲು ೧೨ನೇ ವಯಸ್ಸಿನಲ್ಲೆ ರಂಗಭೂಮಿ ಪ್ರವೇಶಿಸಿದ್ದ ಅವರಿಗೆ ಮೀನಾ ಮದುವೆ ಎಂಬ ನಾಟಕಕ್ಕೆ ಮೊದಲ ಪ್ರಶಸ್ತಿ ಬಂದಿತ್ತು. ಸಂಸ್ಕಾರ ಮತ್ತು ತುಘಲಕ್ ಎಂಬ ಚಾರಿತ್ರಿಕ ನಾಟಕಗಳಲ್ಲಿಯೂ ಅವರ ಪಾತ್ರ ನಿರ್ವಹಣೆ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಂಕರ್ ನಾಗ್ರ ಮಾಲ್ಗುಡಿ ಡೇಸ್, ಟಿ.ಎನ್ ಸೀತಾರಾಮ್ ಅವರ ಮುಕ್ತ, ಮುಕ್ತ-ಮುಕ್ತ, ಮಹಾಪರ್ವ, ಮಿಂಚು ಮುಂತಾದ ಕಿರುತೆರೆಯ ಧಾರಾವಾಹಿಗಳಲ್ಲೂ ಅವರ ಮನತಟ್ಟುವ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿತ್ತು.
ಜಿ.ಕೆ ಗೋವಿಂದರಾವ್ ಪದೇ ಪದೇ ವಿವಾದ ಸೃಷ್ಟಿಸಿಕೊಂಡರು ಅನ್ನುವುದಕ್ಕಿಂತ ಅವರ ಪ್ರತಿ ಮಾತಿನಲ್ಲೂ ವಿವಾದ ಸೃಷ್ಟಿಸಲಾಯ್ತು ಎಂದರೆ ತಪ್ಪಾಗುವುದಿಲ್ಲ. ಅವರನ್ನು ಬಲಪಂಥೀಯರು ಮೊದಲಿನಿಂದಲೂ ಟಾರ್ಗೆಟ್ ಮಾಡಿಕೊಂಡೇ ಬಂದರು. ಆದರೆ ಗೋವಿಂದರಾವ್ ಯಾವುದಕ್ಕೂ ಎದುಗುಂದುವ ಜಾಯಮಾನದವರಾಗಿರಲಿಲ್ಲ. ಹೀಗಾಗಿ ಅನಂತಮೂರ್ತಿ, ಗಿರೀಶ್ ಕಾರ್ನಾರ್ಡ್ ನಂತರ ಮರುಳಸಿದ್ಧಯ್ಯ, ಚಂಪಾ, ದೇವನೂರು ಮಹಾದೇವ, ಎಂ.ಎಂ ಕಲ್ಬುರ್ಗಿ ಮುಂತಾದವರೊಂದಿಗೆ ಬುದ್ದಿಜೀವಿ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದರು. ತಮ್ಮ ದೇಹದಲ್ಲಿ ಕೊನೆಯ ಉಸಿರಿರುವ ತನಕ ಆಳುವ ಸರ್ಕಾರದ ದೌರ್ಜನ್ಯ ಮತ್ತು ಜನವೀರೋಧಿ ನೀತಿಯನ್ನು ಪ್ರತಿಭಟಿಸುತ್ತಲೇ ಬದುಕಿದರು. ಜಿ.ಕೆ ಗೋವಿಂದ್ರಾವ್ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಪದೇ ಪದೇ ಮೂದಲಿಸಿದವರಿಗೆ ಒಂದು ವಿಷಯ ಗೊತ್ತಿಲ್ಲ. “ಇಂದಿರಾ ಹಠಾವೊ- ದೇಶ್ ಬಚಾವೋ” ಎಂದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೀದಿಗಿಳಿದು ಹೋರಾಡಿದ್ದರು ಜಿ.ಕೆ ಗೋವಿಂದರಾವ್. ಜಿಕೆಜಿ ಅಂಬೇಡ್ಕರ್ ಮತ್ತು ಗಾಂಧಿ ನಿಲುವುಗಳನ್ನು ಕೇವಲ ಪ್ರತಿಪಾದಿಸುತ್ತಿರಲಿಲ್ಲ, ಅನುಸರಿಸುತ್ತಿದ್ದರೂ ಕೂಡಾ. ಯಾವುದಾದರೂ ಪುಸ್ತಕ ಇಷ್ಟವಾದರೆ ಆತ್ಮೀಯರಿಗೆ ಕರೆ ಮಾಡಿ ಆ ಪುಸ್ತಕದ ಕುರಿತಾಗಿ ಮೆಚ್ಚುಗೆ ಮಾತಾಡುತ್ತಿದ್ದರು. ನೀವು ಈ ಪುಸ್ತಕ ಓದಬೇಕ್ರಿ ಎಂದು ಒತ್ತಾಯಿಸುತ್ತಿದ್ದರು. ಜಿ.ಕೆ ಗೋವಿಂದರಾವ್ ಅವರಲ್ಲಿ ಒಬ್ಬ ಅಪ್ಪಟ ಪ್ರಾಮಾಣಿಕನಿದ್ದ, ಯಾವುದೇ ಪ್ರಶಸ್ತಿ, ಗೌರವಗಳಿಗೆ ಅವರು ಎಂದಿಗೂ ಹಂಬಲಿಸಲಿಲ್ಲ, ಲಾಬಿ ಮಾಡಲಿಲ್ಲ.
ಅವರು ಪ್ರಕಾಶ್ ರೈಯನ್ನು ಹೇಗೆ ತಮ್ಮ ಶಿಷ್ಯ ಎಂದು ಹೇಳಿಕೊಳ್ಳುತ್ತಿದ್ದರೂ ಅಷ್ಟೇ ಆತ್ಮೀಯತೆಯಿಂದ ಮಣಿಪಾಲದ ಮೋಹನ್ದಾಸ್ ಪೈಯವರನ್ನೂ ತಮ್ಮ ಶಿಷ್ಯ ಎಂದು ಹೇಳಿಕೊಳ್ಳುತ್ತಿದ್ದರು. ನಾನು ಜಿ.ಕೆ ಗೋವಿಂದರಾವ್ ಅವರನ್ನು ಮೊದಲು ನೋಡಿದ್ದು ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರ ಮತ್ತು ಮ್ಯಾಕ್ಬೆತ್ ನಾಟಕೋತ್ಸವದಲ್ಲಿ. ಮತ್ತೊಮ್ಮೆ ಹತ್ತಿರದಿಂದ ಭೇಟಿ ಮಾಡಿದ್ದು ಸುದ್ದಿ ಟಿವಿ ವಾಹಿನಿಯ ಲಾಂಚ್ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಕೊಡಲು ಹೋದಾಗ. “ಏನ್ರೀ, ಭಟ್ರು ಹಾಗೇ ಇದ್ದಾರೋ ಅಥವಾ ಬದಲಾಗಿದ್ದಾರೋ” ಅಂದಿದ್ದರು. ಅವರು ಯಾವ ಬದಲಾವಣೆಯ ಕುರಿತು ಮಾತಾಡ್ತಿದ್ದಾರೆ ಅಂತ ಗೊತ್ತಾಗದೆ ಹಿಹಿಹಿ ಎಂದು ಹಲ್ಲುಬಿಟ್ಟಿದ್ದೆ. ಅವರು ಕೊಟ್ಟ ಅಲ್ಲಮನ ವಚನಗಳ ಸಂಗ್ರಹ ಪುಸ್ತಕ ಈಗಲೂ ನನ್ನ ಬಳಿ ಇದೆ. ಪ್ರಭುತ್ವದ ಅಟ್ಟಹಾಸವನ್ನು ಕಂಚಿನ ಕಂಠದಿಂದ ಗದರುತ್ತಿದ್ದ ಮನೆಯ ಹಿರಿಯ ಜೀವವೊಂದು ಇನ್ನಿಲ್ಲವಾದಾಗ ಕಾಡುವ ವಿಷಾದ ನಮ್ಮನ್ನು ಈಗ ಕಾಡುತ್ತಿದೆ. ಆ ಸರ್ವಶಕ್ತ ಪ್ರಕೃತಿ ಸ್ವರೂಪಿಣಿ ಜಗನ್ಮಾತೆ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲಿ.
-ವಿಶ್ವಾಸ್ ಭಾರದ್ವಾಜ್ (ವಿಭಾ)