ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿದ್ದ ಪ್ರೊ ಜಿ ಕೆ ಗೋವಿಂದರಾವ್ ನಿಧನ, ರಂಗ ಸಮುದಾಯ ಮತ್ತು ಸಾಮಾಜಿಕ ಚಳವಳಿಗೆ ತುಂಬಲಾರದ ನಷ್ಟ. ಸಮುದಾಯ ಬೆಂಗಳೂರು ಪ್ರೋ ಜಿ.ಕೆ ಗೋವಿಂದರಾವ್ ಅವರಿಗೆ ಗೌರವಪೂರ್ಣ ನಮನಗಳನ್ನು ಸಲ್ಲಿಸುತ್ತದೆ. ಕನ್ನಡ ಚಲನಚಿತ್ರ ಕಲಾವಿದ, ಸಾಹಿತಿ, ಹೋರಾಟಗಾರ ಏನೇ ಅಂದರೂ ಪ್ರೋ ಜಿ.ಕೆ ಗೋವಿಂದರಾವ್ ಅವರು ಒಬ್ಬ ರಂಗಕರ್ಮಿ. ನಾಟಕಗಳನ್ನು ಅತೀವ ಪ್ರೀತಿಸುತ್ತಿದ್ದ ಜಿ.ಕೆ ಗೋವಿಂದರಾವ್ ನಾಟಕಗಳು ಜನರ ನಡುವೆ ಸೇತುವೆಯಾಗಬೇಕು ಎಂದು ಬಯಸಿದ್ದರು. ಪ್ರಭುತ್ವದ ವಿರುದ್ದದ ಬಂಡಾಯಗಾರರಾಗಿದ್ದ ಜಿ.ಕೆ ಗೋವಿಂದರಾವ್, ಜನಚಳವಳಿಯಲ್ಲಿ ಜಿಕೆಜಿ ಎಂದೇ ಆಪ್ತರಾಗಿದ್ದರು. ಖಚಿತತೆಯ ಜೋರು ದ್ವನಿಯಲ್ಲಿ ಮಾತನಾಡುತ್ತಿದ್ದ ಜಿ.ಕೆ ಗೋವಿಂದರಾವ್ ಅಪಾರ ಪ್ರೀತಿ ತುಂಬಿದ ಮಾತೃಹೃದಯಿಯಾಗಿದ್ದರು.
ಹತ್ತು ಹಲವು ಸಿನೇಮಾ, ಧಾರವಾಹಿಗಳಲ್ಲಿ ನಟಿಸಿದ್ದ ಜಿ ಕೆ ಗೋವಿಂದರಾವ್ ರವರು ತಮ್ಮ ಪ್ರಭಾವ, ವರ್ಚಸ್ಸನ್ನು ಸಂಪೂರ್ಣವಾಗಿ ಜನ ಚಳವಳಿಗಾಗಿ ಮೀಸಲಿಟ್ಟವರು. ಜಿ.ಕೆ ಗೋವಿಂದರಾವ್ ಅವರು ಸಮುದಾಯ ಬೆಂಗಳೂರು ಇದರ ಅಧ್ಯಕ್ಷರಾಗಿದ್ದರು ಎಂಬುದೇ ಕರ್ನಾಟಕ ಸಾಂಸ್ಕೃತಿಕ ಲೋಕ ಹೆಮ್ಮೆಪಡುವಂತಹ ವಿಚಾರ. ಬಹುಮುಖ ಪ್ರತಿಭೆಯ, ಸ್ನೇಹಮಯಿ ಕಲಾವಿದ, ರಂಗಕರ್ಮಿ, ಚಲನಚಿತ್ರ ನಟ, ಸಾಹಿತಿ, ವೈಚಾರಿಕ ಹೋರಾಟಗಾರ ಜಿಕೆಜಿ ನಿಧನ ಕರ್ನಾಟಕಕ್ಕೆ ತುಂಬಲಾರದ ನಷ್ಟ ಎಂದು ಸಮುದಾಯ ಬೆಂಗಳೂರು ಭಾವಿಸುತ್ತಾ ನಮನಗಳನ್ನು ಸಲ್ಲಿಸುತ್ತದೆ.
-ಸಮುದಾಯ ಬೆಂಗಳೂರು