ಕರಾಟೆ ಕಿಂಗ್ ಶಂಕರ್ ನಾಗ್, ಮೂಲ ಹೆಸರು ನಾಗರ ಕಟ್ಟೆ ಶಂಕರ್, ಅಪ್ಪ ಅಮ್ಮನ ಮುದ್ದಿನ ಭವಾನಿ ಶಂಕರ್, ಅಭಿಮಾನಿಗಳ ಪಾಲಿನ ಶಂಕ್ರಣ್ಣನಿಗೆ 67 ನೇ ಜನ್ಮ ದಿನ ಇಂದು. ಶಂಕರ್ ನಾಗ್ ಬದುಕಿದ್ದರೆ ನಮ್ಮೊಂದಿಗೆ ಇಂದು 67 ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದರು. ನವೆಂಬರ್ 9 1954ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೋಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಜನಿಸಿದರು.
ಅಣ್ಣ ಅನಂತ್ ನಾಗ್ ಜೊತೆಯಲ್ಲಿ ನಾಟಕಕಗಳನ್ನ ನೋಡಲು ಹೋಗುತ್ತಿದ್ದ ಶಂಕರ್ ನಿಧಾನವಾಗಿ ರಂಗಭೂಮಿಯೆಡಗೆ ಆಸಕ್ತಿ ವಹಿಸಿಕೊಂಡರು. ಬ್ಯಾಂಕ್ ನೌಕರಿ ಮಾಡುತ್ತಲೆ ರಂಗಭೂಮಿಲ್ಲಿ ತೊಡಗಿಸಿಕೊಂಡರು. ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕರ್ನಾಡರ “ಒಂದಾನೊಂದು ಕಾಲದಲ್ಲಿ’’ ಸಿನಿಮಾದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿದರು. ಮೊದಲ ಚಿತ್ರದ ಮೂಲಕವೇ ಎಲ್ಲರ ಗಮನ ಸೆಳೆದ ಶಂಕರ್ ಅವರನ್ನ ಹಲವು ಪಾತ್ರಗಳು ಅರಸಿಕೊಂಡು ಬಂದವು.
ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶನಕ್ಕೂ ಕೈ ಹಾಕಿ ಸೈ ಅನಿಸಿಕೊಂಡರು. ಆಟೋರಾಜಚಿತ್ರದ ಮೂಲಕ ಕರ್ನಾಟಕದ ಆಟೋ ಡ್ರೈವರ್ ಗಳ ಮನದ ಮತ್ತು ಆಟೋದಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ನೀರಿನ ಒಳಗಡೆ (under water) ಚಿತ್ರೀಕರಣಗೊಂಡ “ಒಂದು ಮುತ್ತಿನ ಕಥೆ” ಹಂತಹ ಅದ್ಬುತ ಮತ್ತು ಪ್ರಯೋಗಶೀಲ ಚಿತ್ರಗಳನ್ನ ಶಂಕರ್ ನಾಗ್ ನಿರ್ದೇಸಿದ್ದಾರೆ.
ಹೊಸ ತಂತ್ರಜ್ಞಾನದ ಬಗ್ಗೆ ಸದಾ ಕುತೂಹಲ ಹೊಂದಿರುತ್ತಿದ್ದ ಶಂಕರ್ ನಾಗ್ ಅದನ್ನ ಕನ್ನಡ ಚಿತ್ರಗಳಲ್ಲಿ ಅಳವಡಿಸಿಕೊಳ್ಳಲು ಹಂಬಲಿಸುತ್ತಿದ್ದರು. ತಮಗಿದ್ದ ಅದ್ಬುತ ಕಲ್ಪನಾ ಶಕ್ತಿ, ಸೃಜನಶಕ್ತಿಯಿಂದಾಗಿ ತಾವಿದ್ದ ಕಾಲಕ್ಕಿಂತಲೂ ಮಿಗಿಲಾಗಿ ಚಿತ್ರಗಳನ್ನ ತೆರೆಗೆ ತರಲು ಶಂಕರ್ ನಾಗ್ ಪ್ರಯತ್ನಿಸುತ್ತಿದ್ದರು. ಆರ್ ಕೆ ನಾರಾಯಣ್ ಅವರ ಕಾದಂಬರಿಯನ್ನ ಮಾಲ್ಗುಡಿ ಡೇಸ್ ಧಾರಾವಾಹಿಯಾಗಿ ನಿರ್ದೇಶಿಸಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನ ಗಳಿಸಿದರು ಇದು ದೂರದರ್ಶನದಲ್ಲಿ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆಗೊಂಡಿತ್ತು. ಇದು ಇತ್ತೀಚೆಗೆ ಕನ್ನಡಲ್ಲೂ ಡಬ್ ಆಗಿದೆ.
ಸಿನಿಮಾ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಶಂಕರ್ ಅತೀವ ಆಸಕ್ತಿಯನ್ನ ಹೊಂದಿದ್ದರು. ಬೆಂಗಳೂರಿನಂತಹ ನಗರಗಳಲ್ಲಿ ಮೆಟ್ರೋ ನಿರ್ಮಿಸುವ ಬಗ್ಗೆ ಬಹುದಿನಗಳ ಹಿಂದೆಯ ಕನಸ್ಸೊಂದನ್ನ ಕಂಡಿದ್ದರು.
ಅವರ ಮಾತು ಚಿತ್ರಗಳು ಸಂದರ್ಶನದ ಮೂಲಕ ಶಂಕ್ರಣ್ಣ ಅಭಿಮಾನಿಗಳ ಮನದಲ್ಲಿ ಸದಾ ಅಚ್ಚಳಿಯದೇ ಉಳಿಯುತ್ತಾರೆ..ಶಂಕರ್ ಯಾವಾಗಲು ಕರ್ಮಯೋಗಿಯಾಗಿದ್ದರು. ವಿಶ್ರಮಿಸದೇ ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. “ಸತ್ತಾಗ ಮಲಗೋದು ಇದ್ದೇ ಇದೆ, ಎದ್ದಿದ್ದಾಗ ಏನಾದ್ರೂ
ಸಾಧಿಸು” ಎನ್ನುವುದು ಶಂಕರ್ ನಾಗ್ ಅವರ ನಾಣ್ಣುಡಿ.
1990 ಸೆಪ್ಟಂಬರ್ 30 ರಂದು ದಾವಣಗೆರೆಯ ಹೈವೆಯ ಬಳಿ ಶಂಕರ್ ನಾಗ್ ಚಲಾಯಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿತು..ಈ ದುರ್ಘಟನೆಯಲ್ಲಿ ಶಂಕರ್ ನಾಗ್ ನಮ್ಮನೆಲ್ಲ ಬಿಟ್ಟು ಕಣ್ಮುಚ್ಚಿದರು. ಅವರು ಅಸುನೀಗಿದರೂ ಅವರ ಆದರ್ಶಗಳ ಮೂಲಕ ಕನ್ನಡ ಸಿನಿ ಪ್ರೇಮಿಗಳಲ್ಲಿ ನಾಗರ ಕಟ್ಟೆ ಶಂಕರ್ ಶಾಶ್ವತವಾಗಿದ್ದಾರೆ.