ತೆಲುಗು ಹಾಗೂ ತಮಿಳಿನ ಖ್ಯಾತ ಗಾಯಕಿ ಹರಿಣಿ ಅವರ ತಂದೆ ಎಕೆ ರಾವ್ ಅವರ ಮೃತದೇಹವು ಕೆಲವು ದಿನಗಳ ಹಿಂದೆ ರೈಲು ನಿಲ್ದಾಣದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.. ಈ ಸಾವಿನ ಸುತ್ತ ಅನುಮಾನದ ಹುತ್ತವೇ ಇದೆ.. ಸಾಕಷ್ಟು ಗೊಂದಲಗಳಿವೆ.. ರೈಲು ಹಳಿಗಳ ಮೇಲೆ ಶವ ದೊರೆತಿರುವ ಕಾರಣ ಇದು ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ಎಕೆ ರಾವ್ ಕುತ್ತಿಗೆ ಹಾಗೂ ಕೈಯ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾದ ಕಾರಣ ಇದು ಕೊಲೆಯೆಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಹರಿಣಿ ಕುಟುಂಬದವರು ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಶವ ದೊರೆತ ಮೇಲೆ ಅವರು ರೈಲ್ವೆ ಪೊಲೀಸರ ಮುಂದೆ ಹಾಜರಾಗಿದ್ದು, ತಂದೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಅವರ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.. ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದೆ.. 390 ಕೋಟಿ ರೂಪಾಯಿ ಸಾಲದ ಲಿಂಕ್ ಪತ್ತೆಯಾಗಿದೆ.
ಹೌದು ಸುಜನಾ ಫೌಂಡೇಶನ್ ಸಂಸ್ಥೆಯಲ್ಲಿ ಸಿಇಓ ಆಗಿದ್ದ ಹರಿಣಿ ತಂದೆ ಎಕೆ ರಾವ್, ತಮ್ಮ ಪರಿಚಯದ ಇಬ್ಬರು ಉದ್ಯಮಿಗಳಿಗೆ ನೂರಾರು ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಉದ್ಯಮಿ ಗಿರೀಶ್ ಹಾಗೂ ಪಣಿತರನ್ ಎಂಬಾತನಿಗೆ ಹಾಗೂ ಇನ್ನೂ ಒಬ್ಬ ವ್ಯಕ್ತಿಗೆ ಎಕೆ ರಾವ್ ಸಾಲ ಕೊಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ ಎಂಬಾತನಿಂದ ಗಿರೀಶ್ಗೆ 150 ಕೋಟಿ ರುಪಾಯಿ ಸಾಲ, ಪರಿಣತರನ್ ಗೆ 240 ಕೋಟಿ ರುಪಾಯಿ ಸಾಲ ಕೊಡಿಸಲು ಮುಂದಾಗಿದ್ದರು. ಸಾಲ ನೀಡಲು ಮುಂಗಡವಾಗಿ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ 5.90 ಕೋಟಿ ರುಪಾಯಿ ಬಡ್ಡಿ ಹಣವನ್ನು ಪಡೆದುಕೊಂಡಿದ್ದ. ಈ ಮೊತ್ತವನ್ನು ಗಿರೀಶ್ ಹಾಗೂ ಪಣಿತರನ್ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಇದರಿಂದಾಗಿ ಡ್ಯಾನಿಯಲ್, ವಿವೇಕಾನಂದ ಹಾಗೂ ರಾಘವ ವಿರುದ್ಧ ಸುದ್ದಗುಂಟೆಪಾಳ್ಯದಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದ ವಿಚಾರವಾಗಿ ಹರಿಣಿ ತಂದೆ ಎಕೆ ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿದ್ದ ಮರುದಿನವೇ ಎಕೆ ರಾವ್ ನಿಧನರಾಗಿದ್ದಾರೆ.
ನವೆಂಬರ್ 23ರಂದು ಯಲಹಂಕ ರೈಲು ನಿಲ್ದಾಣದ ಬಳಿ ಎಕೆ ರಾವ್ ಶವ ದೊರೆತಿದೆ. ಅವರ ಶವದ ಸಮೀತ ಚಾಕು ಪತ್ತೆಯಾಗಿದೆ. ಕೈ ಹಾಗೂ ಕುತ್ತಿಗೆಯ ಭಾಗದಲ್ಲಿ ಚಾಕುವಿನಿಂದ ಇರಿದ ಗುರುತುಗಳಿವೆ. ಜೊತೆಗೆ ಅವರ ಶವದ ಬಳಿ ದೂರು ಪ್ರತಿಯೊಂದು, ಕೆಲವು ದಾಖಲೆಗಳು, ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಎಕೆ ರಾವ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಪಡೆದಿದ್ದು, ವರದಿ ಬಂದ ಬಳಿಕ ಇದು ಆತ್ಮಹತ್ಯೆಯೋ, ಕೊಲೆಯೊ ಗೊತ್ತಾಗುತ್ತದೆ.