ದೃಶ್ಯ 2 ರಿವ್ಯೂ | ಕೆ.ಜಿ.ಎಫ್ ಸಿನಿಮಾವನ್ನ ನೆನಪಿಸುತ್ತೆ
ಚಿತ್ರ : ದೃಶ್ಯ 2
ನಟ: ರವಿಚಂದ್ರನ್,ನವ್ಯಾ ನಾಯರ್, ಪ್ರಮೋದ್ ಶೆಟ್ಟಿ, ಆರೋಹಿ ನಾರಾಯಣ್, ಉನ್ನತಿ, ಆಶಾ ಶರತ್, ಶಿವಾಜಿ ಪ್ರಭು, ಸಾಧು ಕೋಕಿಲ, ಅನಂತ್ ನಾಗ್
ನಿರ್ದೇಶಕ : ಪಿ. ವಾಸು
ಚಿತ್ರದ ವಿಧ:Kannada, Drama, Thriller
ಅವಧಿ:2 Hrs 26 Min
2014ರಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದ ರವಿಚಂದ್ರನ್ ಅಭಿನಯದ ದೃಶ್ಯ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ದೃಶ್ಯ ರವಿಚಂದ್ರನ್ ಅವರಲ್ಲಿ ಹೊಸ ಚೈತನ್ಯ ತುಂಬಿತ್ತು. ಸಾಮಾನ್ಯ ಮಿಡಲ್ ಕ್ಲಾನ್ ಕುಟುಂಬದ ಯಜಮಾನನಾಗಿ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುವ ರಾಜೇಂದ್ರ ಪೊನ್ನಪ್ಪನಾಗಿ ರವಿಚಂದ್ರನ್ ಮಿಂಚಿದ್ದರು. ದೃಶ್ಯ ಗಲ್ಲಾ ಪಟ್ಟಿಗೆಯಲ್ಲೂ ಭಾರಿ ಕಮಾಯಿ ಮಾಡಿತ್ತು. ಮುಖ್ಯವಾಗಿ ಬಹುದಿನಗಳ ನಂತರ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್ ಗಳತ್ತ ಕರೆ ತರುವಲ್ಲಿ ರವಿಮಾಮ ಯಶಸ್ವಿಯಾಗಿದ್ದರು. ದೃಶ್ಯ ಸಿನಿಮಾದ ಅಂತ್ಯದಲ್ಲಿ ‘ನನ್ ಫ್ಯಾಮಿಲಿ ಸೇಫ್..’ ಅಂತ ರಾಜೇಂದ್ರ ಪೊನ್ನಪ್ಪ ನಿಟ್ಟುಸಿರು ಬಿಡುತ್ತಾನೆ. ಇದೀಗ ದೃಶ್ಯ ಸಿನಿಮಾದ ಮುಂದುವರೆದ ಭಾಗ ದೃಶ್ಯ 2 ರಿಲೀಸ್ ಆಗಿದೆ. ಈಗ ರಾಜೇಂದ್ರ ಪೊನ್ನಪ್ಪ ಹೇಗಿದ್ದಾನೆ.. ಅವರ ಕುಟುಂಬ ಹೇಗಿದೆ..? ಮೊದಲ ಭಾಗದಲ್ಲಿ ಪೊಲೀಸರ ಸಂಕಷ್ಟದಿಂದ ತಪ್ಪಿಸಿಕೊಂಡಿದ್ದ ರಾಜೇಂದ್ರ ಪೊನ್ನಪ್ಪ, ಈ ಬಾರಿ ಪೊಲೀಸರ ಬಲೆಗೆ ಬೀಳುತ್ತಾನಾ..? ಅಥವಾ ಮತ್ತೆ ಚಳ್ಳೆ ಹಣ್ಣು ತಿನಿಸುತ್ತಾನಾ..?
ಕಥೆ
ದೃಶ್ಯ 2 ಸಿನಿಮಾ ವಿಚಾರಕ್ಕೆ ಬಂದರೇ ರಾಜೇಂದ್ರ ಪೊನ್ನಪ್ಪನ ಕುಟುಂಬ ಈಗ ಬದಲಾಗಿದೆ. ಜೊತೆಗೆ ಸ್ವಂತ ಥಿಯೇಟರ್ ಶುರು ಮಾಡಿದ್ದಾನೆ. ಜೀಪಿದ್ದ ಜಾಗದಲ್ಲಿ ಈಗ ಹೊಸ ಕಾರು ಬಂದಿದೆ. ಈ ಬದಲಾವಣೆ ಜೊತೆಗೆ ರಾಜೇಂದ್ರ ಪೊನ್ನಪ್ಪ ಈಗ ಹೊಸ ಸಿನಿಮಾವೊಂದನ್ನು ನಿರ್ಮಾಣ ಮಾಡುವುದಕ್ಕೂ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾನೆ. ಆದ್ರೆ ತರುಣ್ ಕೊಲೆ ಮಾತ್ರ ಇಡೀ ಕುಟುಂಬವನ್ನು ಕಾಡುತ್ತಲೇ ಇದೆ.
ಠಾಣೆಯಲ್ಲಿ ತರುಣ್ ಶವವನ್ನು ಹೂತಿಟ್ಟಿದ್ದ ರಾಜೇಂದ್ರ ಪೊನ್ನಪ್ಪ, ಅದನ್ನ ಎಲ್ಲಿಯೂ ಬಾಯಿಬಿಟ್ಟಿರುವುದಿಲ್ಲ. ಆ ಮೂಲಕ ಪೊಲೀಸರಿಗೆ ಪೊನ್ನಪ್ಪ ಸವಾಲಾಕಿರುತ್ತಾನೆ. ಈ ಸವಾಲನ್ನ ಪೊಲೀಸರು ಬೇಧಿಸಿ, ಠಾಣೆಯಲ್ಲಿದ್ದ ತರುಣ್ ಶವವನ್ನು ಹೊರ ತೆಗೆಯುತ್ತಾರೆ. ಆ ಮೂಲಕ ಪೊನ್ನಪ್ಪ ಅಂಡ್ ಫ್ಯಾಮಿಲಿ ಮತ್ತೆ ಖಾಕಿ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುತ್ತೆ.
ಈ ಸನ್ನಿವೇಶ ಇವಾಗೇನ್ ಮಾಡ್ತಾನೆ ನಿಮ್ ಹೀರೋ..? ವಿಲ್ ಹಿಮ್ ಗೀವ್ ಅಪ್..? ಅರ್ ನಾಟ್..? ಎಂಬ ಕೆಜಿಎಫ್ ಡೈಲಾಗ್ ನೆನಪಿಸುತ್ತೆ. ಚಿತ್ರದಲ್ಲಿ ಖಾಕಿ ಚಕ್ರವ್ಯೂಹವನ್ನು ರಾಜೇಂದ್ರ ಪೊನ್ನಪ್ಪ ಬೇಧಿಸುತ್ತಾನಾ..? ಅಥವಾ ಚಕ್ರವ್ಯೂಹದಲ್ಲಿ ಸಿಕ್ಕಿ ಶರಣಾಗುತ್ತಾನಾ ಅನ್ನೋದೆ ದೃಶ್ಯ 2 ಸಿನಿಮಾ.
ವಿಮರ್ಷೆ..
ಜೀತು ಜೋಸೆಫ್ ಅವರ ಕಥೆಯನ್ನ ನಿರ್ದೇಶಕ ಪಿ.ವಾಸು ಬಹಳ ಮುತುವರ್ಜಿ ವಹಿಸಿ ಯತಾವತ್ತಾಗಿ ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದರೂ ಕನ್ನಡದಲ್ಲಿ ನೋಡುವಾಗ ಎಲ್ಲೂ ಬೋರ್ ಅನಿಸಲ್ಲ. ಇದಕ್ಕೆ ಕಾರಣ ಥ್ರಿಲ್ಲರ್ ಹಾದಿನಲ್ಲಿ ಬರುವ ಸಾಧು ಮಹಾರಾಜ್ ಹಾಸ್ಯ. ಮೊದಲಾರ್ಧವೆಲ್ಲಾ ಸಾಧು ಕಾಮಿಡಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ದ್ವಿತೀಯಾರ್ಧದಲ್ಲಿ ‘ದೃಶ್ಯ 1’ರಲ್ಲಿ ಸಿಕ್ಕಷ್ಟೇ ರೋಚಕತೆ, ಭಾವುಕತೆ ಸಿಗುತ್ತದೆ.
ಮುಖ್ಯವಾಗಿ ಕ್ಲೈಮ್ಯಾಕ್ಸ್ ಸನ್ನಿವೇಶವಂತೂ ಫುಲ್ ಪೈಸಾ ವಸೂಲ್. ಕ್ಲೈಮ್ಯಾಕ್ಸ್ನ ಪ್ರತಿ ದೃಶ್ಯಗಳು, ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ಇಲ್ಲಿ ಹೇಳಲೇಬೇಕಾದ ವಿಷಯ ಏನಂದರೇ ರಾಜೇಂದ್ರ ಪೊನ್ನಪ್ಪ ಸಿನಿಮಾ ನಿರ್ಮಾಣಕ್ಕೂ ಈ ಚಿತ್ರದ ಕ್ಲೈಮ್ಯಾಕ್ಸ್ ಗೂ ಒಂದು ಲಿಂಕ್ ಇದೆ. ಅದು ಸಿನಿಮಾದಲ್ಲಿಯೇ ನೋಡಬೇಕು.
ಇನ್ನುಳಿದಂತೆ ಜಿಎಸ್ವಿ ಸೀತಾರಾಮ್ ಛಾಯಾಗ್ರಹಣಕ್ಕೆ ಫುಲ್ ಮಾರ್ಕ್ಸ್ ಕೊಡಲೇಬೇಕು. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಸಿನಿಮಾದ ರೋಚಕತೆಯನ್ನ ಹೆಚ್ಚಿಸುತ್ತೆ.
ನಟ-ನಟಿಯರು ಹೇಗೆ ಮಾಡಿದ್ದಾರೆ..?
ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ರವಿಚಂದ್ರನ್, ಜವಾಬ್ದಾರಿ ತಂದೆಯಾಗಿ, ಪತ್ನಿಯನ್ನ ರೇಗಿಸುವ ಪತಿಯಾಗಿ, ಚಾಣಾಕ್ಷ ಕ್ರಿಮಿನಲ್ ಹೀರೋ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇದಾದ ಬಳಿಕ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯೋದು ಪ್ರಮೋದ್ ಶೆಟ್ಟಿ ಅವರ ಪಾತ್ರ. ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ರೈಟರ್ ಪಾತ್ರದಲ್ಲಿ ಅನಂತ್ ನಾಗ್ ರ ಅಭಿನಯ ಬಗ್ಗೆ ಹೇಳುವಷ್ಟು ದೊಡ್ಡವರು ನಾವಲ್ಲ. ಇನ್ನುಳಿದಂತೆ ನವ್ಯಾ ನಾಯರ್, ತರುಣ್ ಪೋಷಕರ ಪಾತ್ರ ಮಾಡಿರುವ ಶಿವಾಜಿ ಪ್ರಭು, ಆಶಾ ಶರತ್ ತಮ್ಮ ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೊಂಡಿದ್ದಾರೆ.
ಪ್ಲಸ್ ಅಂಡ್ ಮೈನಸ್ ಪಾಯಿಂಟ್ಸ್
ಮೊದಲಾರ್ಧ ಕೊಂಚ ನಿಧಾನವಾಗಿ ಸಾಗುತ್ತದೆ ಅನ್ನೋದನ್ನ ಬಿಟ್ಟರೇ ಚಿತ್ರದಲ್ಲಿ ಮತ್ಯಾವ ಮೈನಸ್ ಪಾಯಿಂಟ್ಸ್ ಇಲ್ಲ.
ರೇಟಿಂಗ್ : 5ಕ್ಕೆ 4.5