Puneeth Rajkumar : ಅಪ್ಪುಗಾಗಿ ಪುಸ್ತಕ ನಮನ..!!!
ಪುನೀತ್ ರಾಜ್ ಕುಮಾರ್ ಇಲ್ಲ ಎಂಬ ನೋವನ್ನು ಅರಗಿಸಿಕೊಳ್ಳೋಕೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡು ನಾಲ್ಕು ತಿಂಗಳಾಗುತ್ತಾ ಬಂದಿದೆ. ಪುನೀತ್ ರಾಜ್ ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಹೆಸರನ್ನು ಬಯಸದೇ ತರೆಮರೆಯಲ್ಲಿ ಅನೇಕ ಸಮಾಜ ಸೇವಾ ಕೆಲಸಗಳನ್ನು ಮಾಡಿದ್ದರು. ಬಲಗೈಯಲ್ಲಿ ಕೊಟ್ಟ ದಾನ ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ಬದುಕಿದ ಪುಣ್ಯಾತ್ಮ. ಈತನ ಕುರಿತು ವರ್ಣಿಸಲು ಪದಗಳೇ ಇಲ್ಲ. ಆದರೆ ಅವರ ಜೀವಾಮಾನದ ಸಾಧನೆಯನ್ನು ಅಕ್ಷರ ರೂಪದಲ್ಲಿ ಹೊರ ಬರುತ್ತಿದೆ.
ಹೌದು ಪುನೀತ್ ರಾಜ್ಕುಮಾರ್ ಅವರನ್ನು ಬಹಳಷ್ಟು ಹತ್ತಿರದಿಂದ ಬಲ್ಲವರಾದ ಶರಣು ಹುಲ್ಲೂರು ಅವರು ಈ ಕೃತಿಯಲ್ಲಿ ಅವರೊಂದಿಗಿನ ಒಡನಾಟದ ಕುರಿತು ಬರೆದುಕೊಂಡಿದ್ದಾರೆ. ‘ಪುನೀತ್ ಅವರು ಯಾವತ್ತೂ ವರದಿಗಾರರ ಮೇಲೆ ಮುನಿಸಿಕೊಂಡವರು ಅಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೆ ತಿರುಗಿ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಅವರು ನಮ್ಮವರೇ ಆಗಿದ್ದರು. ಆ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ, ಅವರ ಜತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನಾನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ , ಪತ್ರಕರ್ತರ ಪರವಾಗಿ ನಾನು ಸಲ್ಲಿಸುತ್ತಿರುವ ಪುಸ್ತಕದ ಗೌರವವಿದು’ ಎಂದು ಬರೆದುಕೊಂಡಿದ್ದಾರೆ.
ಈ ಪುಸ್ತಕ ಬರೆಯೋಕೆ ಕಾರಣವಾದ ಘಟನೆಯನ್ನು ಶರಣು ನೆನಪಿಸಿಕೊಂಡಿದ್ದಾರೆ. ‘ಇಂಥದ್ದೊಂದು ಪುಸ್ತಕ ಬರೆಯಲು ಕಾರಣವಾಗಿದ್ದು 2 ಸೆಪ್ಟೆಂಬರ್ 2020. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ಕುಮಾರ್ ಅವರು. ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ‘ಮುಂದಿನ ಪುಸ್ತಕವನ್ನು ಅಪ್ಪು ಅವರದ್ದೇ’ ಮಾಡಿ ಎಂದರು. ಅಂದು ವೀರಕಪುತ್ರ ಶ್ರೀನಿವಾಸ್ ಅವರು ಕೂಡ ಇದ್ದರು. ‘ಅಯ್ಯೋ ನನ್ನ ಪುಸ್ತಕವಾ ಬೇಡ’ ಎಂದವರು, ಎಲ್ಲರ ಒತ್ತಾಯಕ್ಕೆ ಮಣಿದು ಅಪ್ಪು ಸರ್ ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಮಾಡಿದೆ’ ಎಂದಿದ್ದಾರೆ ಶರಣು ಹುಲ್ಲೂರು. ಸಿನಿಮಾ ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಪುನೀತ್ ಅವರ ಜೀವನ ಕಥನದ ಕೃತಿಯನ್ನು ಬರೆದು ಹೊರ ತರುತ್ತಿದ್ದಾರೆ.